ಸಿದ್ದಾಪುರ: ಕರ್ನಾಟಕ ಹಾಗೂ ಗುಜರಾತನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿ ಕಣಕ್ಕಿಳಿಸುವ ಗುರಿ ಹೊಂದಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ವಿವೇಕಾನಂದ ಸಾಲಿನ್ಸ್ ತಿಳಿಸಿದರು.
ಸಿದ್ದಾಪುರದ ಬಾಲಭವನದಲ್ಲಿ ಬುಧವಾರ ನಡೆದ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ನಾವು ಶಿಕ್ಷಣ ಹಾಗೂ ಅರೋಗ್ಯ ಸೇವೆಯಲ್ಲಿ ಕ್ರಾಂತಿ ಮಾಡಿದ್ದೇವೆ. ನಮ್ಮ ಒಳ್ಳೆ ಕೆಲಸ ಹಾಗೂ ಸರಳತೆ ನೋಡಿ ಪಂಜಾಬಿನಲ್ಲಿ ಜನ ಕೈಹಿಡಿದರು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಪಕ್ಷವಾಗಿ ರೂಪುಗೊಳ್ಳುತ್ತಿದೆ. ಬಿಜೆಪಿಯವರು ವಿಪಕ್ಷಗಳ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಗುಜರಾತಿನಲ್ಲಿ ಅಧಿಕಾರ ಹಿಡಿಯುವ ಭಯದಲ್ಲಿ ಮೋದಿ ಸಿಬಿಐ, ಐಟಿ ಮೂಲಕ ಆಮ್ ಆದ್ಮಿ ಪಕ್ಷದ ಮುಖಂಡರ ಮನೆ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ಗುಜರಾತ್ ಹಾಗೂ ಕರ್ನಾಟಕದ ಮುಂಬರುವ ಚುನಾವಣೆಗೆ ಎಲ್ಲಾ ಕ್ಷೇತ್ರಗಳಿಗೂ ಆಮ್ ಆದ್ಮಿ ಅಭ್ಯರ್ಥಿ ಹಾಕುವ ಗುರಿ ಇಟ್ಟುಕೊಂಡಿದ್ದೇವೆ. ಹಂತ ಹಂತವಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುತ್ತೇವೆ. ದೆಹಲಿ ಮಾದರಿಯನ್ನು ಜನರ ಮುಂದಿಟ್ಟು ಜನರ ಬಳಿಗೆ ಹೋಗುತ್ತೇವೆ ಎಂದರು.
ಈ ವೇಳೆ ಆಮ್ ಆದ್ಮಿ ಪಕ್ಷದ ಕರಾವಳಿ ವಲಯ ಪ್ರಧಾನ ಕಾರ್ಯದರ್ಶಿ ಕೀರ್ತಿರಾಜ್, ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ, ಸಿದ್ದಾಪುರ ತಾಲೂಕಾ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಕಾಶ್ ಕೊಂಡ್ಲಿ,
ರೈತ ಸಂಘದ ಅಧ್ಯಕ್ಷ ಕೆರಿಯಪ್ಪ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಹೆಗಡೆ, ತಾಲೂಕಾ ಮಹಿಳಾ ಅಧ್ಯಕ್ಷೆ ಜಯಲಕ್ಷ್ಮೀ ನಾಯ್ಕ, ಪ್ರಮುಖರಾದ ಅಜಯ ಶೇಟ್ ಉಪಸ್ಥಿತರಿದ್ದರು. ಪಕ್ಷದ ರಾಘವೇಂದ್ರ ನಾಯ್ಕ ಕಾವಂಚೂರು ನಿರೂಪಿಸಿದರು.