ಸಿದ್ದಾಪುರ: ಸ್ವಾತಂತ್ರ್ಯವನ್ನು ಸ್ವೆಚ್ಚಾಚಾರಕ್ಕೆ ಬಳಸಿಕೊಳ್ಳದೇ ಸದೃಢ ಸಮಾಜದ ನಿರ್ಮಾಣಕ್ಕೆ ಬಳಕೆಯಾಗಬೇಕು. ಯುವಜನತೆ ಯಾವುದೇ ವ್ಯಸನಗಳಿಗೆ ಅಂಟಿಕೊಳ್ಳದೇ ಸುಭದ್ರ ಭಾರತಕ್ಕೆ ಕೈಜೋಡಿಸಿಬೇಕು ಎಂದು ತಾಲೂಕಾ ದಂಡಾಧಿಕಾರಿಗಳಾದ ಸಂತೋಷ ಭಂಡಾರಿ ಕರೆ ನೀಡಿದರು.
ಅವರು ತಾಲೂಕಾ ಆಡಳಿತದ ವತಿಯಿಂದ ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ
ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಗಂಡು ನೆಲ ಸಿದ್ದಾಪುರದಲ್ಲಿ ಸಾವಿರಾರು ಮಹನೀಯರು ಚಳವಳಿಯಲ್ಲಿ ಪಾಲ್ಗೊಂಡು ದೇಶದ ಸ್ವಾತಂತ್ರ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದ್ವೇಷ, ಅಂಧಕಾರ ಗಳನ್ನು ಬದಿಗೊತ್ತಿ ಬಲಿಷ್ಠ ರಾಷ್ಟ್ರ ಕಟ್ಟಲು ಶ್ರಮಿಸಬೇಕು. ಗುರು ಹಿರಿಯರಲ್ಲಿ ಪೂಜ್ಯ ಭಾವನೆ ಬೆಳಸಿಕೊಳ್ಳ ಬೇಕು. ಆ ಮೂಲಕ ಉತ್ತಮ ನಾಗರಿಕರಾಗಿ ಜಾತಿ ಮತ ಧರ್ಮ ವಿಲ್ಲದ ಬಲಿಷ್ಠ ರಾಷ್ಟ್ರ ಕಟ್ಟಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಶಾಂತಿ ಪ್ರೌಢಶಾಲೆಯ ತುಷಾರ್ ಶಾನಭಾಗ, ನಾಣಿಕಟ್ಟಾ ಸರ್ಕಾರಿ ಪ್ರೌಢಶಾಲೆಯ ಮೀನಾಕ್ಷಿ ಗೌಡ, ಕಾಳಿಕಾ ಭವಾನಿ ಪ್ರೌಢಶಾಲೆಯ ಸತ್ಯನಾರಾಯಣ ಭಟ್, ರಜತ್ ಹೆಗಡೆ, ಪ್ರಶಾಂತಿ ಪ್ರೌಢಶಾಲೆಯ ಪವಿತ್ರಾ ಕಾಮತ್, ಕಾನಗೋಡ ಸರ್ಕಾರಿ ಪ್ರೌಢಶಾಲೆಯ ಸಂದೇಶ ಬೋರಕರ್, ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಆನಂದ ನಾಯ್ಕ, ಅಜಿತ್ ಕೊಡಿಯಾ, ಜಯಂತ್ ನಾಯ್ಕ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ನೀಡಲಾದ ಅಸಾಧಾರಣಾ ಪ್ರತಿಭೆ ಪ್ರಶಸ್ತಿ ಪಡೆದ ಸುಹಾಸ್ ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಪಪಂ ಉಪಾಧ್ಯಕ್ಷ ರವಿಕುಮಾರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ, ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರಾವ್, ಸಿಪಿಐ ಕುಮಾರ ಕೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಶಿರಸ್ತೆದಾರ ಎನ್.ಐ.ಗೌಡ ಸ್ವಾಗತಿಸಿದರು. ದೈಹಿಕ ಶಿಕ್ಷಕ ರಾಜು ನಾಯ್ಕ ನಿರೂಪಿಸಿದರು.