ಯಾದಗಿರಿ : ಶಾಲೆಗಳಲ್ಲಿ ಸಮವಸ್ತ್ರವೇ ಕಡ್ಡಾಯ, ಹಿಜಾಬ್, ಕೇಸರಿ ಶಾಲು ಯಾವುದೂ ಕೂಡ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪು ನೀಡಿದ ಬೆನ್ನಲ್ಲಿಯೇ ಯಾದಗಿರಿ (Yadagiri) ಕಾಲೇಜಿನಲ್ಲಿ ಇದನ್ನು ಜಾರಿ ಮಾಡಲಾಗಿದೆ. ಕೋರ್ಟ್ ಈ ಕುರಿತಾಗಿ ತೀರ್ಪು ನೀಡಿದೆ, ಅದನ್ನು ನೀವು ಪಾಲಿಸಬೇಕು ಎಂದು ಅಲ್ಲಿನ ಹಿಬಾಜ್ ಧರಿಸಿದ ಬಾಲಕಿಯರಿಗೆ ಹೇಳಿದರೆ, ಬಾಲಕಿಯರು ಪರೀಕ್ಷೆಯನ್ನು ಮಧ್ಯದಲ್ಲೇ ಬಿಟ್ಟು ಹೊರನಡೆದಿದ್ದಾರೆ.
ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸುರಪುರ (Surapura) ತಾಲೂಕು ಕೆಂಬಾವಿ (Kembhavi) ಸರಕಾರಿ ಪಿಯು ಕಾಲೇಜಿನ (Govt PU College) ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದಾರೆ. ಮುಂಬರುವ ಪರೀಕ್ಷೆಗಳ ತಯಾರಿಗೆ ಸಂಬಂಧಪಟ್ಟಂತೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಆದರೆ ಹೈಕೋರ್ಟ್ ತೀರ್ಪು ಕೇಳಿದ ಕೂಡಲೇ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಮಾಹಿತಿ ಪ್ರಕಾರ ಈ ವಿದ್ಯಾರ್ಥಿಗಳ ಪರೀಕ್ಷೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಬೇಕಿತ್ತು. ಆದರೆ, ಪರೀಕ್ಷೆಯ ಮಧ್ಯದಲ್ಲಿಯೇ ಹೊರ ನಡೆಯುವ ಮೂಲಕ ಹೈಕೋರ್ಟ್ ತೀರ್ಪಿಗೆ ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತಾಗಿ ನಾವು ನಮ್ಮ ಪೋಷಕರೊಂದಿಗೆ ಮಾತನಾಡಲಿದ್ದೇವೆ. ಹಿಜಾಬ್ ಧರಿಸದೇ ಶಾಲೆಗೆ ಹೋಗಬಹುದು ಎಂದು ಅವರು ಒಪ್ಪಿಗೆ ನೀಡಿದರೆ ಮಾತ್ರವೇ ತರಗತಿಗಳಿಗೆ ಬರುತ್ತೇವೆ. ಅಲ್ಲಿಯವರೆಗೂ ಬರುವುದಿಲ್ಲ. ಕೇವಲ ಹಿಜಾಬ್ ಅನ್ನು ಧರಿಸಿ ಮಾತ್ರವೇ ನಾವು ಪರೀಕ್ಷೆಯನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹಿಜಾಬ್ ತೆಗೆದು ಬರಬೇಕು ಎಂದು ಹೇಳಿದರೆ, ನಾವು ಪರೀಕ್ಷೆಯನ್ನೇ ನೀಡುವುದಿಲ್ಲ ಎಂದಿದ್ದಾರೆ.
ಉಡುಪಿಯ ( Udupi ) ಕಾಲೇಜಿನಲ್ಲಿ ಮೊದಲಿಗೆ ಆರಂಭಗೊಂಡ ಈ ಹಿಜಾಬ್ ವಿವಾದ ಬಳಿಕ ರಾಜ್ಯದ ಹಲವು ಜಿಲ್ಲೆಗಳಿಗೆ ವಿಸ್ತರಿಸಿತ್ತು. ಮೊದಲಿಗೆ ಧಾರ್ಮಿಕ ಸಂಘಟನೆಗಳ ಬೆಂಬಲ ಪಡೆದ ವಿವಾದಕ್ಕೆ ಬಳಿಕ ರಾಜಕೀಯ ಬಣ್ಣವೂ ಮೆತ್ತಿಕೊಂಡಿತು. ಹೀಗಾಗಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಈ ವಿಷಯ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ವೇದಿಕೆಯಾಯ್ತು. ಅಷ್ಟುಸಾಲದೆಂಬಂತೆ ನೊಬೆಲ್ ಪುರಸ್ಕೃತೆ ಮಲಾಲಾ ಮೊದಲಾದವರು ಇದರಲ್ಲಿ ಮೂಗು ತೂರಿಸಿದ ಪರಿಣಾಮ, ವಿವಾದ ದೇಶದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಯ್ತು.