ಬಾಯಾರಿದ ಹಾವಿಗೆ ಅಂಗೈಯಲ್ಲಿ ನೀರು ಕುಡಿಸಿದ ವ್ಯಕ್ತಿ..!

ಬಾಯಾರಿದ ಹಾವಿಗೆ ವ್ಯಕ್ತಿಯೊಬ್ಬ ತನ್ನ ಅಂಗೈಯಲ್ಲೇ ನೀರು ಕುಡಿಸಿ ಧೈರ್ಯ ಮೆರೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ತನ್ನ ಅಂಗೈಗಳ ಮೇಲೆ ಬಾಟಲಿಯಿಂದ ನೀರನ್ನು ಸುರಿದು ಎಚ್ಚರಿಕೆಯಿಂದ ಹಾವಿಗೆ ನೀಡುತ್ತಿರುವ ದೃಶ್ಯವಿದೆ. ಹಾವು ಕೂಡ ಯಾವುದೇ ಗಾಬರಿ ಇಲ್ಲದೇ ಈತನ ಅಂಗೈ ಮೇಲೆ ಬಿದ್ದ ನೀರನ್ನು ಹಾವು ಸದ್ದಿಲ್ಲದೆ  ಕುಡಿಯುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತಿದೆ. 

ಸಾಮಾನ್ಯವಾಗಿ ಹಾವು ನೋಡಿದ ಕೂಡಲೇ ನೀರು ಕುಡಿಸುವುದಿರಲಿ ಹಾರಿ ಬಿದ್ದು ದೂರ ಓಡುವವರೇ ಹೆಚ್ಚು. ಹೀಗಾಗಿ ಕೈಯಲ್ಲಿ ಹಾವಿಗೆ ನೀರು ಕುಡಿಸುತ್ತಿರುವ ಈ ವ್ಯಕ್ತಿಯನ್ನು ನೋಡಿದ ಜನ ನಿಜಕ್ಕೂ ಗಾಬರಿಯಾಗಿದ್ದಾರೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ, ‘ಬೇಸಿಗೆ ಸಮೀಪಿಸುತ್ತಿದೆ. ನಿಮ್ಮ ಕೆಲವು ಹನಿಗಳು ಇನ್ನೊಬ್ಬರ ಜೀವವನ್ನು ಉಳಿಸಬಹುದು. ನಿಮ್ಮ ತೋಟದಲ್ಲಿ ಸ್ವಲ್ಪ ನೀರನ್ನು ಪಾತ್ರೆಯಲ್ಲಿ ಬಿಡಿ, ಅದು ಅನೇಕ ಪ್ರಾಣಿಗಳಿಗೆ ಜೀವನ ಮತ್ತು ಸಾವಿನ ನಡುವಿನ ಆಯ್ಕೆ ನೀಡಬಲ್ಲದು ಎಂದು ಬರೆದು ಅವರು ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. 

ಈ ವಿಡಿಯೋ ವೈರಲ್ ಆಗಿದ್ದು, ಭಯದ ಜೊತೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವಿಡಿಯೋ ನೋಡಿ ಇದೇ ರೀತಿ ಹಾವಿಗೆ ನೀರು ಕೊಡಲು ಹೋಗದಿರಿ, ಇದನ್ನು ಮೇಲ್ವಿಚಾರಣೆಯಲ್ಲಿ ಮಾಡಲಾಗಿರುವುದರಿಂದ ಇದನ್ನು ಪ್ರಯತ್ನಿಸದಿರಿ ಎಂದು ಎಚ್ಚರಿಕೆ ನೀಡಿದ್ದಾರೆ. ಹಾವನ್ನು ನೀರಿನ ದಾಹದಿಂದ ಕಾಪಾಡಿದ ನಿಮಗೆ ಧನ್ಯವಾದ ಎಂದು ನೋಡುಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. 

ಹಾವು (Snake).. ಹೆಸರು ಕೇಳ್ತಿದ್ದಂತೆ ಅನೇಕರು ಬೆಚ್ಚಿ ಬೀಳ್ತಾರೆ. ಕನಸಿ (Dream)ನಲ್ಲಿ ಹಾವು ಕಂಡ್ರು ಭಯ (Fear)ವಾಗುತ್ತದೆ. ಭಾರತದಲ್ಲಿ ನಾನಾ ಬಗೆಯ ಹಾವುಗಳಿವೆ. ಹಾವು ಕಡಿತದಿಂದ ಹೆಚ್ಚು ಜನರು ಸಾಯುವ ವಿಶ್ವದ ಏಕೈಕ ದೇಶ ಭಾರತ ಅಂದ್ರೆ ನೀವು ನಂಬ್ಲೇಬೇಕು. ವಿಶ್ವಾದ್ಯಂತ ಪ್ರತಿ ವರ್ಷ ಹಾವು ಕಡಿತದಿಂದ ಸಾವನ್ನಪ್ಪುವ ಜನರಲ್ಲಿ ಅರ್ಧದಷ್ಟು ಸಾವು ಭಾರತ (India)ದಲ್ಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 2000 ರಿಂದ 2019 ರವರೆಗೆ ಹಾವು ಕಡಿತದಿಂದಾಗಿರುವ ಸಾವಿನ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. 2000 ರಿಂದ 2019 ರವರೆಗೆ ಭಾರತದಲ್ಲಿ ಹಾವು ಕಡಿತದಿಂದ 1.2 ಮಿಲಿಯನ್ (ವರ್ಷಕ್ಕೆ ಸರಾಸರಿ 58,000) ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಾವನ್ನಪ್ಪಿದ ಸುಮಾರು ಅರ್ಧದಷ್ಟು ಜನರು 30-69 ವರ್ಷದವರು. ಕಾಲು ಭಾಗಕ್ಕಿಂತ ಹೆಚ್ಚು ಜನರು 15 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಎಂದು ವರದಿಯಲ್ಲಿ ಹೇಳಲಾಗಿದೆ.  


ಇನ್ನು ವರದಿಯಲ್ಲಿ ಯಾವ ರಾಜ್ಯದಲ್ಲಿ ಹೆಚ್ಚು ಸಾವು ಸಂಭವಿಸಿದೆ ಎಂಬುದನ್ನೂ ಹೇಳಲಾಗಿದೆ. ವರದಿ ಪ್ರಕಾರ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಹಾವಿನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆ 2030 ರ ವೇಳೆಗೆ ಹಾವು ಕಡಿತದ ಸಾವಿನ ಸಂಖ್ಯೆಯನ್ನು ಅರ್ಧಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.

WhatsApp
Facebook
Telegram
error: Content is protected !!
Scroll to Top