ಭಟ್ಕಳ : ರಷ್ಯಾದ ದಾಳಿಯಿಂದಾಗಿ ಇಡೀ ಉಕ್ರೇನ್ ದೇಶ ಭಯಭೀತವಾಗಿದೆ . ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು , ಭಾರತೀಯರನ್ನು ವಾಪಸ್ಸು ಕರೆ ತರಲು ಕೇಂದ್ರ ಸರಕಾರ ಪ್ರಯತ್ನ ಮುಂದುವರೆಸಿದೆ .
ಈ ನಡುವೆ ಉಕ್ರೇನ್ನಲ್ಲಿ ಎಮ್ಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಭಟ್ಕಳ ಮೂಲದ ವಿದ್ಯಾರ್ಥಿನಿಯೋರ್ವಳು ಉಕ್ರೇನ್ ಯುದ್ಧವನ್ನು ಮೊದಲೇ ಊಹಿಸಿಕೊಂಡು ಕಳೆದ ಫೆ .18 ರಂದೇ ಭಾರತಕ್ಕೆ ವಾಪಸ್ಸಾಗಿರುವ ಬಗ್ಗೆ ಮಾಹಿತಿ ಲಭಿಸಿದೆ .
ಭಟ್ಕಳ ಬಂದರ್ ರೋಡ್ 5 ನೇ ಕ್ರಾಸ್ನ ನಿವಾಸಿ , ಸದ್ಯ ಕೊಲ್ಲಾಪುರದಲ್ಲಿ ನೆಲೆಸಿರುವ ರುಕಿಯಾ ಮಹೆವಿಸ್ ತಂದೆ ಅಬ್ದುಲ್ ಹಮೀದ್ ಭಾರತಕ್ಕೆ ವಾಪಸ್ಸಾದ ವಿದ್ಯಾರ್ಥಿನಿಯಾಗಿದ್ದಾಳೆ . ರುಕಿಯಾ ಎಮ್ಬಿಬಿಎಸ್ 2 ನೇ ವರ್ಷದ ವಿದ್ಯಾರ್ಥಿಯಾಗಿದ್ದು , ಈಕೆ ದೆಹಲಿ ಮೂಲದ ನಾಲ್ವರು ವಿದ್ಯಾರ್ಥಿನಿಯರೊಂದಿಗೆ ಉಕ್ರೇನ್ನ ಹಾಸ್ಟೆಲ್ವೊಂದರಲ್ಲಿ ತಂಗಿದ್ದಳು .
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಸುದ್ದಿಮಾಧ್ಯಮಗಳು ಬಿತ್ತರಿಸುತ್ತಿದ್ದಂತೆಯೇ ರುಕಿಯಾ ಹಾಗೂ ಆಕೆಯ ಸಹಪಾಠಿಗಳು ಕಂಗಾಲಾಗಿದ್ದರು . ರುಕಿಯಾ ಗೆಳತಿಯರು ಭಾರತಕ್ಕೆ ವಾಪಸ್ಸು ಬರಲು ಸಿದ್ಧರಾಗಿ , ಹೊರಡುವ ಮುನ್ನ ರುಕಿಯಾ ತಾಯಿಯನ್ನು ಸಂಪರ್ಕಿಸಿದ್ದಾರೆ . ಉಕ್ರೇನ್ನಲ್ಲಿರುವ ಪರಿಸ್ಥಿತಿಯನ್ನು ವಿವರಿಸಿ ರುಕಿಯಾಳನ್ನು ಭಾರತಕ್ಕೆ ಕರೆದುಕೊಂಡು ಬರುವ ಬಗ್ಗೆ ತಿಳಿಸಿದ್ದಾರೆ . ಇದಕ್ಕೆ ರುಕಿಯಾಳ ತಾಯಿ ಒಪ್ಪಿದ್ದು , ದೆಹಲಿಯ ಗೆಳತಿಯರು ಆಕೆಯನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ .