ರಾಜ್ಯ ( ಕೊಪ್ಪಳ): ಪ್ರಾಣಿಗಳನ್ನು ಬಲಿಕೊಟ್ಟರೆ ದೇವರು ಒಲಿಯುವುದಿಲ್ಲ. ಶ್ರದ್ಧಾ ಭಕ್ತಿಯಿಂದ ಪೂಜಿಸಿ, ಪ್ರಾರ್ಥನೆ ಸಲ್ಲಿಸಬೇಕು ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಕುಂಬಳಾವತಿ ಗ್ರಾಮದೇವತೆ ದ್ಯಾಮಾಂಬಿಕ ದೇವಿ ಜಾತ್ರೆಗೆ ಹರಕೆ ನೀಡಲು ಬಿಟ್ಟಿದ್ದ ಕೋಣವನ್ನು ಬುಧವಾರ ಗ್ರಾಮಸ್ಥರಿಂದ ಪಡೆದುಕೊಂಡು ಮಾತನಾಡಿದರು.
ದೇವಸ್ಥಾನದ ಆವರಣದಲ್ಲಿ ಪ್ರಾಣಿಗಳನ್ನು ಬಲಿಕೊಟ್ಟು, ದೇವಾನು ದೇವತೆಗಳು ನೆಲೆಸಿರುವ ಪವಿತ್ರ ಸ್ಥಳಗಳನ್ನು ಕಸಾಯಿ ಖಾನೆಗಳಾಗಿ ಮಾಡಬೇಡಿ. ದೇವಸ್ಥಾನಗಳು ವಧಾಲಯಗಳಾಗದೇ, ದಿವ್ಯಾಲಯಗಳಾಗಬೇಕು. ದೇವರ ಹೆಸರಿನಲ್ಲಿ ಹರಕೆಯ ರೂಪದಲ್ಲಿ ದೇವಸ್ಥಾನದ ಆವರಣ, ಸುತ್ತಮುತ್ತ ಕೋಣ, ಕುರಿ, ಆಡು ಬಲಿ ನೀಡುವುದು ಕಾನೂನು ರೀತಿ ಅಪರಾಧವಾಗಿದೆ. 2021ರ ಜಾನುವಾರು ಹತ್ಯೆ ತಡೆ ನಿಷೇಧ ಕಾಯಿದೆ ಪ್ರಕಾರ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಪ್ರಾಣಿಯನ್ನು ಕೊಲ್ಲುವುದು ಅಪರಾಧವಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾದವರಿಗೆ ಐದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.
ಭಕ್ತರು ಪ್ರಾಣಿ ಬಲಿ ನೀಡದೆ ಅರಶಿಣ, ಕುಂಕುಮ, ಧೂಪ, ಸಿಹಿ ಖಾದ್ಯ ದೇವರಿಗೆ ಸಮರ್ಪಿಸಿ, ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದರು.