ರಾಜ್ಯದಲ್ಲಿ ಚುನಾವಣೆಗೆ ಒಂದೇ ವರ್ಷ ಬಾಕಿ ಉಳಿದಿದೆ. ಜಿಲ್ಲೆಯ ನಾಯಕರು ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಬೆಳಗಾವಿ (ಜನವರಿ. 27): ಬೆಳಗಾವಿ ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗವಾಗಿದ್ದು, ನಾಯಕರು ವಾಗ್ಸಮರ ಮುಂದುವರೆಸಿದ್ದಾರೆ. ಇತ್ತೀಚಿಗೆ ಸಚಿವ ಉಮೇಶ ಕತ್ತಿ (Umesh Katti) ನಿವಾಸದಲ್ಲಿ ನಡೆದ ಸಭೆ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಸೋಲಿನ ಬಳಿಕ ನಾಯಕರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೆ ಏರಿದೆ. ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಎರಡು ಬಣ ಇರೋದು ಬಹಿರಂಗವಾಗಿದೆ. ಉಮೇಶ ಕತ್ತಿ ನಿವಾಸದಲ್ಲಿ ನಡೆದ ಸಭೆಯ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಇಂದು ಮತ್ತೊಮ್ಮೆ ತಿರುಗೇಟು ನೀಡಿದ್ದರು. ಸಭೆ ಅಧಿಕೃತ, ಅನಧಿಕೃತ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ರಾಜ್ಯದಲ್ಲಿ ಚುನಾವಣೆಗೆ ಒಂದೇ ವರ್ಷ ಬಾಕಿ ಉಳಿದಿದೆ. ಜಿಲ್ಲೆಯ ನಾಯಕರು ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಗೋಕಾಕ್ ನಗರದಲ್ಲಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ನಡೆದ ಸಭೆ ಮಾಜಿ ಸಚಿವ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಹಾಗೂ ಮಹೇಶ ಕುಮಟಹಳ್ಳಿಯನ್ನು ಆಹ್ವಾನ ನೀಡಿಲ್ಲ. ಈ ವಿಚಾರದ ದೊಡ್ಡದು ಮಾಡಲು ಹೋಗಲ್ಲ, ಪಕ್ಷದಿಂದಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಪಕ್ಷದ ದೃಷ್ಠಿಯಿಂದ ಈ ಬೆಳವಣಿಗೆ ಸರಿಯಲ್ಲ, ಇದನ್ನು ಶೀಘ್ರದಲ್ಲಿಯೇ ಮಾತುಕತೆ ಮೂಲಕ ಸರಿ ಮಾಡಲಾಗುವುದು ಎಂದರು.
ಶೀಘ್ರದಲ್ಲೇ ಭಿನ್ನಾಭಿಪ್ರಾಯ ಶಮನಕ್ಕೆ ಸಭೆ
ರಾಜ್ಯವನ್ನು ಕಟ್ಟುವ ನಾಯಕರು ಬೆಳಗಾವಿ ಜಿಲ್ಲೆಯಲ್ಲಿಯೇ ಇದ್ದೇವೆ, ನಾವೇಲ್ಲ ಶೀಘ್ರದಲ್ಲಿಯೇ ಸಭೆ ಮಾಡಿ ಆಗಿರೋ ತಪ್ಪುಗಳನ್ನು ಸರಿ ಮಾಡುತ್ತೇವೆ. ನಾನು ರಮೇಶ ಜಾರಕಿಹೊಳಿ ಯಾರು ಪಕ್ಷ ವಿರೋಧ ಚಟುವಟಿಕೆ ಮಾಡಿಲ್ಲ. ಸದ್ಯ ಪವರ್ ಏಂಜಾಯ್ ಮಾಡೋವರಿಗೆ ಒಂದು ವಿನಂತಿ. ರಮೇಶ ಜಾರಕಿಹೊಳಿ, ಮಹೇಶ ಕುಮಟಹಳ್ಳಿ ಹಾಗೂ ಶ್ರೀಮಂತ ಪಾಟೀಲ್ ತ್ಯಾಗದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ.
17 ಜನ ಶಾಸಕರು ಪಕ್ಷಕ್ಕೆ ಬರದೇ ಇದ್ರೆ ಯಾರು ರಾಜ್ಯಸಭೆ ಸದಸ್ಯರು ಆಗುತ್ತಿರಲಿಲ್ಲ, ಡಿಸಿಎಂ ಸಹ ಆಗುತ್ತಿರಲಿಲ್ಲ ಎಂದು ಈರಣ್ಣ ಕಡಾಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ರು. ಜಿಲ್ಲೆಯಲ್ಲಿ ಆಗಿರೋ ಭಿನ್ನಾಭಿಪ್ರಾಯವನ್ನು ಶೀಘ್ರದಲ್ಲಿಯೇ ಎಲ್ಲರೂ ಸಭೆ ಸೇರಿ ಚರ್ಚೆ ನಡೆಸಿ ಇತ್ಯರ್ಥ ಪಡಿಸುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ರು.
2023ರ ವಿಧಾನಸಭೆ ಚುನಾವಣೆಯಲ್ಲಿ ನಾನು ಅರಬಾವಿಯಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಈ ಬಗ್ಗೆ ಕ್ಷೇತ್ರದಲ್ಲಿ ದೊಡ್ಡ ಗೊಂದಲ ಸೃಷ್ಠಿ ಮಾಡಲಾಗುತ್ತಿದೆ. ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದು ನಿಶ್ಚಿತ. ಈ ಬಗ್ಗೆ ನಾನು ಬಾಂಡ್ ಮೇಲೆ ಬರೆದು ಕೊಡಲು ಸಹ ಸಿದ್ದ ಎಂದರು.
ಸಭೆಗೆ ಕುರಿತು ಕಿಡಿ
ಬೆಳಗಾವಿಯಲ್ಲಿ ನಡೆದ ಸಭೆ ಬಿಜೆಪಿ ಅಧಿಕೃತ ಪಕ್ಷದ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ಬೇಡ. ಈ ಸಭೆಯಲ್ಲಿ ಯಾರನ್ನ ಹೊರಗಿಟ್ಟಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಜಿಲ್ಲೆಯಲ್ಲಿ ಯಾರು ಎಷ್ಟು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ದಿನಕ್ಕೊಬ್ಬರಂತೆ ಸಭೆ ನಡೆಸುತ್ತ ಹೋದರೆ ಅದಕ್ಕೆಲ್ಲ ಉತ್ತರಿಸುವ ಗೋಜಿಗೆ ಗೆ ಹೋಗಲ್ಲ. 2008 ರಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆ ಗೆ ಕೆಲಸ ಮಾಡುತ್ತೇವೆ. ಈಗ ನಡೆದಿರುವ ವಿದ್ಯಮಾನಗಳನ್ನ ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಪೋಸ್ಟ್ ಹಾಕುವ ಮೂಲಕ ಕತ್ತಿ ಟೀಮ್ ಗೆ ಟಾಂಗ್ ಕೊಟ್ಟಿದ್ದರು.