ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ತಮ್ಮ ಮನೆಗೆ ಶೃಂಗರಿಸಲಾಗಿದ್ದ ವಿದ್ಯುತ್ ದೀಪಗಳಿಗೆ ಅನಧಿಕೃತವಾಗಿ ಕರೆಂಟ್ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಡಿ ಕುಮಾರಸ್ವಾಮಿ ಕರೆಂಟ್ ಕಳ್ಳ ಎಂದು ಪೋಸ್ಟರ್ ಅಂಟಿಸಿದ್ದರು. ಇದರಿಂದ ಆಕ್ರೋಶಗೊಂಡ ಹೆಚ್ಡಿ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ ಅವರ ಪಾಲುದಾರಿಕೆಯ ಲುಲು ಮಾಲ್ನ ಆಸ್ತಿ ಮತ್ತು ಬಳಕೆ ಮಾಡಿರುವ ವಿದ್ಯುತ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಬೆಂಗಳೂರು ನ.17: ದೀಪವಾಳಿ ಹಬ್ಬದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ (HD Kumaraswamy) ಮನೆಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಈ ವಿದ್ಯುತ್ ದೀಪಗಳಿಗೆ ಅನಧಿಕೃತವಾಗಿ ಕರೆಂಟ್ (Current) ಕಂಬದಿಂದ ಸಂಪರ್ಕ ಪಡೆಯಲಾಗಿತ್ತು. ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿ ದಂಡ ಪಾವತಿಸಿದ್ದರು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಕ್ಕೆ ಕಾಂಗ್ರೆಸ್ (Congress) ಕಾರ್ಯಕರ್ತರು ಜೆಡಿಎಸ್ ಕಚೇರಿ ಕಂಪೌಂಡ್ಗಳಿಗೆ “ಕರೆಂಟ್ ಕಳ್ಳ” ಎಂಬ ಪೋಸ್ಟರ್ ಅಂಟಿಸಿದ್ದರು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಪಾಲುದಾರಿಕೆಯ ಲುಲು ಮಾಲ್ನ (Lulu Mall) ಆಸ್ತಿ ಮತ್ತು ಬಳಕೆ ಮಾಡಿರುವ ವಿದ್ಯುತ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲುಲು ಮಾಲ್ಗೆ 24 ಎಕರೆ ಖರಾಬು ಭೂಮಿಯನ್ನ ಕಬಳಿಸಲಾಗಿದೆ. 1934ರ ಭೂಮಿಯ ದಾಖಲೆಗಳನ್ನು ಸುಟ್ಟು ಹಾಕಿ ನಾಶ ಮಾಡಿದ್ದಾರೆ. ಇವರೆಲ್ಲ ಹೇಗೆಲ್ಲಾ ದಾಖಲೆ ಬದಲಾಯಿಸಿದ್ದಾರೆಂದು ಗೊತ್ತಿದೆ. ಭೂದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಭೂಮಿ ಕಬಳಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಆರೋಪ ಮಾಡಿದರು.
ಲುಲು ಮಾಲ್ ಕಾಮಗಾರಿ ವೇಳೆ, ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ಬಿಲ್ ನೀಡಿಲ್ಲ. ಆಗ ಲುಲು ಮಾಲ್ಗೆ ಬಳಕೆ ಮಾಡಿದ್ದ ವಿದ್ಯುತ್ಗೆ ದಂಡ ಹಾಕುತ್ತೀರಾ? ಹೈ ಟೆನ್ಷನ್ ವೈರ್ ಅಂಡರ್ ಗ್ರೌಂಡ್ನಲ್ಲಿ ತೆಗೆದುಕೊಂಡು ಮಾಲ್ಗೆ ಹೋಗಿದ್ದಾರೆ. ಅದಕ್ಕೆ ಎಷ್ಟು ಹಣ ಕಟ್ಟಿದ್ದೀರಾ? ಸುಜಾತ ಟಾಕೀಸ್ ಮುಂದೆ ಇದ್ದ ಹೈ ಟೆನ್ಷನ್ ವೈರ್ ಹೇಗೆ ಅಂಡರ್ ಗ್ರೌಂಡ್ನಲ್ಲಿ ತಗೊಂಡು ಹೋದರಿ? ಜನರಿಗಾಗಿ ಮಾಡಿದ್ರಾ? ನಕಲಿ ಸೊಸೈಟಿಯನ್ನ ಅಸಲಿ ಮಾಡಿಕೊಳ್ಳೋರು ಇವರು ಎಂದು ಆರೋಪಿಸಿದರು.