ಭಟ್ಕಳ : ನಮ್ಮ ಪ್ರತಿಷ್ಟಿತ ಮಾರುತಿ ಸಹಕಾರಿ ಪತ್ತಿನ ಸಂಘವ ಲಾಭದಾಯಕ ಹಾದಿಯಲ್ಲಿ ಸದಸ್ಯರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ ಎಂದು ಅಶೋಕ ಪೈ ಹೇಳಿದರು
ಮಾರುತಿ ಸಹಕಾರಿ ಪತ್ತಿನ ಸಂಘದ ೨೪ ನೇ ವಾರ್ಷಿಕ ಮಹಾ ಸಭೆಯು ಶಿರಾಲಿಯ ಶ್ರೀ ಮಾರುತಿ ದೇವಸ್ಥಾನದ ಸಭಾಗೃಹದಲ್ಲಿ ಸೆಪ್ಟೆಂಬರ್ ೨೪ ರಂದು ಜರುಗಿತು. ಸಂಘದ ಅಧ್ಯಕ್ಷರಾದ ಅಶೋಕ ಪೈ ಯವರು ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘವು ಪ್ರಸ್ತುತ ಸಾಲಿನಲ್ಲಿ ೮೯.೩೧ ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ಸದಸ್ಯರಿಗೆ ರೂ. ೮೬.೭೨ ಕೋಟಿ ಸಾಲವನ್ನು ನೀಡಿ ೯೮.೮೭% ಸಾಲ ವಸೂಲಾತಿಯೊಂದಿಗೆ ಸುಮಾರು ೨.೩೦ ಕೋಟಿಗೂ ಮಿಕ್ಕಿ ಲಾಭಗಳಿಸಿ ಸುಧೃಢವಾಗಿದೆ ಎನ್ನುತ್ತಾ ಸದಸ್ಯರಿಗೆ ೧೩% ಲಾಭಾಂಶ ಘೋಷಿಸಿದರು. ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ ೧೨ ವರ್ಷಗಳಿಂದ ಸಂಘವು “ಅ” ದರ್ಜೆ ಪಡೆದಿದೆ ಎನ್ನುತ್ತಾ ಪ್ರತಿ ವರ್ಷದಂತೆ ಈ ಬಾರಿಯೂ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಗರಿಷ್ಟ ಅಂಕ ಪಡೆದ ೨೯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದರು. ಶ್ರೀ ಅಶೋಕ ಪೈ ಇವರು ಸದಸ್ಯರೊರ್ವರ ಪ್ರಶ್ನೆಗೆ ಉತ್ತರಿಸುತ್ತಾ ಭಟ್ಕಳ ಶಾಖೆಯು ಅತ್ಯುತ್ತಮ ಪ್ರಗತಿ ಸಾಧಿಸಿದ್ದು ಕಳೆದೆರಡು ವರ್ಷಗಳ ಅವಧಿಯಲ್ಲಿ ಸುಮಾರು ೧೪ ಕೊಟಿ ಠೇವಣಿ ೪ ಕೊಟಿ ಸಾಲ ಹೆಚ್ಚಿಗೆಯಾಗಿದ್ದು ಸಾಲ ವಸೂಲಾತಿಯಲ್ಲಿ ೯೦% ರಿಂದ ೯೯%ಗೆ ಏರಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಸುಬ್ರಾಯ ಕಾಮತ ಸಾಂದರ್ಭಿಕವಾಗಿ ಮಾತನಾಡುತ್ತ ಶಿರಾಲಿಯಲ್ಲಿ ಸಂಘದ ಸ್ವಂತ ಕಟ್ಟಡಕ್ಕಾಗಿ ಸ್ಥಳ ಖರೀದಿ ಮಾಡಲಾಗಿದ್ದು ಸದ್ಯದಲ್ಲಿಯೇ ಕಟ್ಟಡ ನಿರ್ಮಾಣ ಪ್ರಾರಂಭಗೊಳ್ಳಲಿದೆ ಎಂದರು. ಹಿರಿಯ ಸದಸ್ಯರಾದ ಡಿ.ಜೆ. ಕಾಮತ, ಉಪನ್ಯಾಸಕರಾದ ಎ. ಎಮ್. ಮುಲ್ಲಾ, ರಾಮದಾಸ ಮಹಾಲೆ, ವೆಂಕಟೇಶ ನಾಯ್ಕ, ªÄಂಜುನಾಥ ಪ್ರಭು ಮುಂತಾದವರು ಸಂಘದ ಆಡಳಿತ ಮಂಡಳಿಯು ನೀಡಿದ ಪ್ರಾಮಾಣಿಕ ನಿಸ್ವಾರ್ಥ ಸೇವೆ ಹಾಗೂ ಸಿಬ್ಭಂದಿಗಳ ಶ್ರಮವನ್ನು ಶ್ಲಾಘಿಸಿದರು. ಸಂಘದ ಸದಸ್ಯರಾದ ವಿನೋದ ಭಟ್ಟ ಇವರು ಮಾತನಾಡಿ ಸಂಘದ ಹೊಸ ಶಾಖೆಯನ್ನು ತೆರೆಯುವಂತೆ ಸಲಹೆಯನ್ನಿತ್ತರು. ಸಂಘದ ಸದಸ್ಯರಾದ ಜೀವೊತ್ತಮ ಪೈ ಹಾಗು ವಿಘ್ನೇಶ ಪ್ರಭು ತಮ್ಮ ಸಲಹೆಸೂಚನೆಗಳನ್ನಿತ್ತರು. ಸಂಘದ ಮುಖ್ಯಕಾರ್ಯನಿರ್ವಾಹಕರಾದ ರಾಜೇಂದ್ರ ಶಾನಭಾಗ ವರದಿಯನ್ನು ವಾಚಿಸಿದರು. ಪ್ರಾರಂಭದಲ್ಲಿ ಸಂಘದ ನಿರ್ದೇಶಕರಾದ ನರೇಂದ್ರ ನಾಯಕ ಸ್ವಾಗತಿಸಿದರೆ ಕೊನೆಯಲ್ಲಿ ನಿರ್ದೇಶಕರಾದ ನಾಗೇಶ ಪೈ ವಂದನಾರ್ಪಣೆಗೈದರು. ಸಿಬ್ಬಂದಿ ಶ್ಯಾಮಸುಂದರ್ ಪ್ರಭು ಪ್ರಾರ್ಥಿಸಿದರೆ ಭಟ್ಕಳ ಶಾಖೆಯ ಪ್ರಬಂಧಕರಾದ ಪ್ರಸನ್ನ ಪ್ರಭು ರವರು ಸಭೆಯ ಕಾರ್ಯಕಲಾಪವನ್ನು ನಿರ್ವಹಿಸಿದರು.