ಪಕ್ಷದ ಕಾರ್ಯಕರ್ತರಲ್ಲಿ ಸಂಘಟನೆ ಮುಖ್ಯ ವ್ಯಕ್ತಿ ಮುಖ್ಯವಲ್ಲ ಕೆ.ಜಿ ನಾಯ್ಕ ಹಣಜೀ ಬೈಲ್

ಸಿದ್ದಾಪುರ: ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಲ್ಲಿ ಸಂಘಟನೆ ಮುಖ್ಯ ಯಾವುದೇ ವ್ಯಕ್ತಿಯಲ್ಲ. ವ್ಯಕ್ತಿ ಇಂದು ಬಂದು ನಾಳೆ ಹೋಗುತ್ತಾರೆ ಆದರೆ ಸಂಘಟನೆ ಶಾಶ್ವತ. ಸಂಘಟನೆಯ ತತ್ವ ಸಿದ್ಧಾಂತಕ್ಕೆ ಯಾವುದೇ ವ್ಯಕ್ತಿ ವಿರುದ್ಧವಾಗಿದ್ದರೆ ಅಂಥ ವ್ಯಕ್ತಿಯನ್ನು ಸಂಘಟನೆ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ ನಾಯ್ಕ ಹಣಜೀಬೈಲ್ ಹೇಳಿದರು.
ಅವರು ಪಟ್ಟಣದ ಬಾಲಭವನದಲ್ಲಿ ಸೋಮವಾರ ನಡೆದ ಬಿಜೆಪಿ ಸಿದ್ದಾಪುರ ಮಂಡಲದ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘಟನೆಯಲ್ಲಿರುವ ನಾವೆಲ್ಲ ಸಂಘಟನೆಯ ರೀತಿ-ನೀತಿ ನಿಯಮಗಳನ್ನು ಪಾಲಿಸುವ ಜೊತೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಗಮನ ಹರಿಸಬೇಕಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಡಲದ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಮಾತನಾಡಿ, ನಾವೆಲ್ಲ ಸೈದಾಂತಿಕ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುತ್ತಾ ಬಂದಿದ್ದು, ಪಕ್ಷವು ನೀಡಿರುವ ಕರ್ತವ್ಯ ಹಾಗೂ ಜವಾಬ್ದಾರಿ ನಮ್ಮ ಮೇಲೆ ಇದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ 8 ವರ್ಷದ ಸಾಧನೆಯ ಪತ್ರಗಳನ್ನು ಮನೆಮನೆಗೆ ತೆರಳಿ ವಿತರಿಸಿದ್ದು ಈ ಮೂಲಕ ಸರ್ಕಾರದ ಹಲವು ಜನಪರ ಯೋಜನೆಯನ್ನು ಜನರಿಗೆ ತಿಳಿಸಲಾಗಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಈ ದೃಷ್ಟಿಯಿಂದ ನಾವು ನಮಗೆ ಕೊಟ್ಟಿರುವ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡೋಣ ಎಂದರು.
ಮಂಡಲದ ಪ್ರಭಾರಿ ಕುಮಾರ್ ಮಾರ್ಕಂಡೆ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿರುವ ಸುಸಂದರ್ಭದಲ್ಲಿ ಅದನ್ನು ಅತೀ ವಿಜೃಂಭಣೆಯಿಂದ ಆಚರಿಸುವ ಜೊತೆಗೆ ಅಮೃತ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಗಳಾಗಿ ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸೋಣ ಎಂದ ಅವರು ಜಿಲ್ಲೆ ಹಾಗೂ ರಾಜ್ಯದಿಂದ ಬಂದಿರುವ ಮಾಹಿತಿಯನ್ನು ನೀಡಿದರು.
ಸಭೆಗೂ ಮುನ್ನ ಇತ್ತೀಚಿಗಷ್ಟೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಕಡಕೇರಿ, ಗುರುಪ್ರಸಾದ್ ಹೆಗಡೆ, ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ, ಸದಸ್ಯರಾದ ನಂದನ ಬೋರ್ಕರ್, ವೆಂಕೋಬ, ಜಿಲ್ಲಾ ಮಟ್ಟದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೇಸ್ತ ಸ್ವಾಗತಿಸಿದರು. ಪ್ರಸನ್ನ ಹೆಗಡೆ ವಂದಿಸಿದರು.

WhatsApp
Facebook
Telegram
error: Content is protected !!
Scroll to Top