ದಿ ಕಾಶ್ಮೀರ್ ಫೈಲ್ ನಿರ್ದೇಶಕನ ವಿರುದ್ಧ ದೂರು ದಾಖಲು

ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ‘ದಿ ಕಾಶ್ಮೀರ್ ಫೈಲ್’ ಸಿನಿಮಾ ಒಂದಿಲ್ಲೊಂದು ಕಾರಣಕ್ಕಾಗಿ ಸದ್ದು ಮಾಡುತ್ತಲೇ ಇದೆ. ಟ್ಯಾಕ್ಸ್ ಫ್ರಿ ಸೇರಿದಂತೆ ಹಲವು ಕಾರಣಗಳಿಂದಾಗಿ ರಾಜಕೀಯ ವಲಯದಲ್ಲಿ ಈ ಸಿನಿಮಾದ ಬಗ್ಗೆ ಪರ ವಿರೋಧದ ಮಾತು ಕೇಳಿ ಬರುತ್ತಿದ್ದರೆ, ಮತ್ತೊಂದು ಕಡೆ ಧಾರ್ಮಿಕ ಮನಸುಗಳು ಬಡಿದಾಡುತ್ತಿವೆ.

ಈ ನಡುವೆ ಸಿನಿಮಾವನ್ನು ಸ್ವಯಂ ಪ್ರೇರಿತರಾಗಿ ಅಲ್ಲಲ್ಲಿ ಉಚಿತ ಪ್ರದರ್ಶನ, ಸೆಲೆಬ್ರಿಟಿ ಪ್ರದರ್ಶನಗಳು ಕೂಡ ಏರ್ಪಟ್ಟಿವೆ. ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲೂ ಈ ಸಿನಿಮಾದ ಕುರಿತು ಗಲಾಟೆ ನಡೆಯಿತು. ದೆಹಲಿ ಮುಖ್ಯಮಂತ್ರಿ ಕೆಜ್ರಿವಾಲಾ ಅವರು ಯೂಟ್ಯೂಬ್ ನಲ್ಲಿ ಸಿನಿಮಾ ಹಾಕಿ, ಎಲ್ಲರಿಗೂ ಉಚಿತವಾಗಿ ಸಿನಿಮಾ ತೋರಿಸಿ ಎಂದು ಟಾಂಗ್ ಕೊಟ್ಟರು. ಕಂಗನಾ ರಣಾವತ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಈ ಸಿನಿಮಾದ ಬೆನ್ನಿಗೆ ನಿಂತುಕೊಂಡರು. ನೋಡು ನೋಡುತ್ತಿದ್ದಂತೆಯೇ ಸಿನಿಮಾ ಬಾಕ್ಸ್ ಆಫೀಸಿನಲ್ಲಿ 200 ಕೋಟಿಗೂ ಅಧಿಕ ಗಳಿಕೆ ಮಾಡಿತು. ಈಗಲೂ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾ ನಿರ್ದೇಶಕರ ಮೇಲೆ ದೂರೊಂದು ದಾಖಲಾಗಿದೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭೋಪಾಲ್ ಜನರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಮುಂಬೈನ ವರ್ಸೋವಾದಲ್ಲಿನ ಪಿ.ಆರ್ ಮ್ಯಾನೇಜರ್ ರೋಹಿತ್ ಪಾಂಡೆ ಎನ್ನುವವರು ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಊರಿನ ಜನರ ಬಗ್ಗೆ ವಿವೇಕ್ ಕೆಟ್ಟದ್ದಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ

ವಿವೇಕ್ ಅಗ್ನಿಹೋತ್ರಿ ಸಂದರ್ಶನವೊಂದರಲ್ಲಿ ‘ಭೋಪಾಲ್ ಜನರನ್ನು ಸಾಮಾನ್ಯವಾಗಿ ಸಲಿಂಗಿ ಕಾಮಿಗಳು ಅಂದುಕೊಳ್ಳುತ್ತಾರೆ. ಕಾರಣ ನವಾಬಿ ಆಸೆಗಳು. ನಾನೂ ಕೂಡ ಭೂಪಾಲದವನು. ಭೂಪಾಲಿ ಜನ ಎಂದರೆ ಅವರನ್ನು ಬೇರೆ ರೀತಿಯಲ್ಲೇ ಕಲ್ಪಿಸಿಕೊಳ್ಳುತ್ತಾರೆ. ಹಾಗಾಗಿ ನಾನು ಆ ಭಾಗದವನು ಎಂದು ಹೇಳಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿದೆ.

WhatsApp
Facebook
Telegram
error: Content is protected !!
Scroll to Top