ಗುಜರಾತ್‌ನಲ್ಲಿ ಬಿಜೆಪಿ ಸೋಲಿಸಲು ಅವಕಾಶ ನೀಡಿ: ರಾಹುಲ್ ಗಾಂಧಿ ಬಳಿ ಪ್ರಶಾಂತ್ ಕಿಶೋರ್ ಮನವಿ!

ಈ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸಲು ಅವಕಾಶ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಶಾಂತ್ ಕಿಶೋರ್ ಸ್ವತಃ ಸಂಪರ್ಕ ಮಾಡಿದ್ದಾರೆ ಎಂದು ವರದಿಯಾಗಿದೆ.

ಹೊಸದಿಲ್ಲಿ: ಈ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಕಾಂಗ್ರೇಸ್‌  ಪ್ರಚಾರ ಕಾರ್ಯಗಳಿಗೆ ಕೆಲಸ ಮಾಡಲು ಚುನಾವಣಾ ಚಾಣಾಕ್ಷ ಪ್ರಶಾಂತ ಕಿಶೋರ್‌  ಅವರು ಕಾಂಗ್ರೆಸ್ ನಾಯಕ ರಾಹುಲ್‌ ಗಾಂದಿ  ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಹಲವು ಸುತ್ತುಗಳ ಮಾತುಕತೆಗಳ ನಂತರ ನಡೆದಿದ್ದ ಮಾನಟಕೀಯ ಬೆಳವಣಿಗೆಗಳ ಮಧ್ಯೆ, ಈ ಹೊಸ ನಡೆ ಕುತೂಹಲ ಮೂಡಿಸಿದೆ.

ಪ್ರಶಾಂತ್ ಕಿಶೋರ್ ಅವರು ಕಳೆದ ವರ್ಷ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೂ ಮುನ್ನ ನಡೆದ ಮಾತುಕತೆಗಳು ಮುರಿದುಬಿದ್ದಿದ್ದವು. ಪ್ರಶಾಂತ್ ಕಿಶೋರ್ ಮತ್ತು ರಾಹುಲ್ ಗಾಂಧಿ ನಡುವೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಇದರ ಬಳಿಕ ಕಾಂಗ್ರೆಸ್ ನಾಯಕತ್ವ ಮತ್ತು ಕಿಶೋರ್ ನಡುವೆ ಸಂಧಾನ ಪ್ರಯತ್ನಗಳು ನಡೆದಿದ್ದು, ಕೆಲವು ತಿಂಗಳ ಬಳಿಕ ಇದು ಶಮನವಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳ ಚುನಾವಣೆ ವೇಳೆ ತನ್ನ ಪರ ಪ್ರಚಾರ ತಂತ್ರ ರೂಪಿಸಲು ಪ್ರಶಾಂತ್ ಕಿಶೋರ್ ಜತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕಾಂಗ್ರೆಸ್‌ಗೆ ಕೈ ಕೊಟ್ಟಿದ್ದ ಅವರು, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪರ ಪ್ರಚಾರದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ತಂತ್ರ ಹೆಣೆಯಲು ಸ್ವತಃ ಪ್ರಶಾಂತ್ ಕಿಶೋರ್ ಅವರೇ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಗುಜರಾತ್ ಚುನಾವಣೆಗೆ ಮಾತ್ರವೇ ಒಂದು ಬಾರಿ ಕೆಲಸ ಮಾಡುವ ಆಫರ್ ನೀಡಿದ್ದು, ಪಕ್ಷದ ಇತರೆ ಚಟುವಟಿಕೆಗಳಿಗೆ ತಾವು ಅಂಟಿಕೊಳ್ಳುವುದಿಲ್ಲ ಎಂಬ ಷರತ್ತನ್ನು ಅವರು ಇರಿಸಿದ್ದಾರೆ ಎಂದು ವರದಿಯಾಗಿದೆ. ಕಿಶೋರ್ ಅವರ ಪ್ರಸ್ತಾಪ ಕುರಿತು ಕಾಂಗ್ರೆಸ್ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮಂಗಳವಾರ ಗುಜರಾತ್ ಕಾಂಗ್ರೆಸ್ ನಾಯಕರ ಜತೆ ರಾಹುಲ್ ಗಾಂಧಿ ನಡೆಸಿದ ಸಭೆಯಲ್ಲಿ ಕೂಡ ಇದು ಚರ್ಚೆಗೆ ಬಂದಿತ್ತು.

ಕಿಶೋರ್ ಅವರ ಸಹಾಯ ಪಡೆಯುವ ಬಗ್ಗೆ ಕೆಲವು ಗುಜರಾತ್ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಹುಲ್ ಗಾಂಧಿ ಅವರದ್ದಾಗಿದೆ.

ಕಳೆದ ವರ್ಷ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ದಟ್ಟವಾಗಿದ್ದವು. ಆದರೆ, ವಿವಿಧ ಕಾರಣಗಳಿಂದ ಈ ಮಾತುಕತೆ ಮುರಿದುಬಿದ್ದಿತ್ತು. ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜತೆ ಪ್ರಶಾಂತ್ ಕಿಶೋರ್ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ರಾಹುಲ್ ಗಾಂಧಿ ಮನೆಗೆ ಅವರು ತೆರಳುವ ಚಿತ್ರ ಸಾಕಷ್ಟು ಊಹಾಪೋಹಗಳನ್ನು ಸೃಷ್ಟಿಸಿತ್ತು. ಆದರೆ ಅವರ ಕಾಂಗ್ರೆಸ್ ಪ್ರವೇಶ ಸಾಧ್ಯವಾಗಿರಲಿಲ್ಲ.

ಈ ಮಾತುಕತೆ ವಿಫಲವಾದ ಬೆನ್ನಲ್ಲೇ, ಕಾಂಗ್ರೆಸ್ ವಿರುದ್ಧ ಕಿಶೋರ್ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸುವುದು ಯಾವುದೇ ವ್ಯಕ್ತಿಯ ದೈವಿಕ ಹಕ್ಕು ಅಲ್ಲ ಎನ್ನುವ ಮೂಲಕ ಗಾಂಧಿ ಕುಟುಂಬದ ಬಗ್ಗೆ ಕಿಡಿಕಾರಿದ್ದರು. ಅದರ ನಂತರವೂ ಅನೇಕ ಬಾರಿ ಅವರು ಪರೋಕ್ಷ ಮತ್ತು ನೇರ ಬಾಣಗಳನ್ನು ಪ್ರಯೋಗಿಸಿದ್ದರು. 2024ರ ರಾಷ್ಟ್ರೀಯ ಚುನಾವಣೆಯಲ್ಲಿ ವಿರೋಧಪಕ್ಷದ ಬಣದಿಂದ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಲು ಸಾಧ್ಯವಿದೆ. ಆದರೆ ಈಗಿನ ನಾಯಕತ್ವದಡಿ ಅದು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು.

WhatsApp
Facebook
Telegram
error: Content is protected !!
Scroll to Top