ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಗುಜರಿ ಅಂಗಡಿಯಲ್ಲಿ ಗುಜರಿಗಾಗಿ ತಂದಿಟ್ಟಿದ್ದ ಸಿಲಿಂಡರ್ ಇದೀಗ ಮಾಲೀಕರನ್ನು ಬಲಿ ಪಡೆದುಕೊಂಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಉಡುಪಿ: ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನಪ್ಪಿರುವ ಘಟನೆ ಕಾಪು ತಾಲೂಕಿನ ಫಕೀರನಕಟ್ಟೆಯಲ್ಲಿ ನಡೆದಿದೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂಗಡಿಯ ಪಾಲುದಾರರಾದ ಚಂದ್ರನಗರದ ರಜಬ್ ಹಾಗೂ ಇನ್ನೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೋರ್ವ ಪಾಲುದಾರ ಹಸನಬ್ಬ, ಬೆಳಪು ಗ್ರಾಪಂ ಸದಸ್ಯ ಫಹೀಮ್ ಬೆಳಪು ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಜರಿಯಾಗಿ ಸಿಕ್ಕ ಸಿಲಿಂಡರ್ !
ಇತ್ತೀಚೆಗೆ ಗುಜರಿಗೆಂದು ಸಿಲಿಂಡರ್ ಬಂದಿತ್ತು. ಇದನ್ನು ಪಡೆದುಕೊಂಡು ಮಾಲಕರು ಅಂಗಡಿಯಲ್ಲಿ ಇಟ್ಟಿದ್ದರು. ಇದೇ ಸಿಲಿಂಡರ್ ಇದೀಗ ಸ್ಪೋಟಗೊಂಡಿದೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಗುಜರಿಗೆಂದು ಸಿಕ್ಕಿರುವ ಸಿಲಿಂಡರ್ ನಲ್ಲಿ ಗ್ಯಾಸ್ ಇರುವ ಬಗ್ಗೆ ಅಂಗಡಿ ಮಾಲೀಕರು ಪರಿಶೀಲನೆ ನಡೆಸದೆ ತಂದು ಇಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಸ್ಪೋಟದ ತೀವ್ರತೆಗೆ ಗುಜರಿ ಅಂಗಡಿಯಲ್ಲಿ ಇರಿಸಲಾದ ಹಳೆಯ ಪ್ರಿಜ್ ಸೇರಿದಂತೆ ಗುಜರಿ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ವಾಹನಗಳೊಂದಿಗೆ ಆಗಮಿಸಿರುವ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಸ್ಪೋಟಕ್ಕೆ ನೈಜ ಕಾರಣ ತನಿಖೆ ಬಳಿಕ ತಿಳಿದುಬರಬೇಕಿದೆ.