ಪಿಡಿಒ ಪತ್ನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ..!

ರಾಜ್ಯ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಹೂಗ್ಯಂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆನಂದ ಶ್ಯಾಮ ಕಾಂಬ್ಳೆ ಅವರ ಪತ್ನಿ ವಿದ್ಯಾಶ್ರೀ ಎಂಬವರು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಿಡಿಒ ಆನಂದ ಶ್ಯಾಮ ಕಾಂಬ್ಳೆ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದವರು. ಕಳೆದ 3 ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ವಿದ್ಯಾಶ್ರೀ (22) ಜೊತೆ ಮದುವೆಯಾಗಿದ್ದರು. ಆನಂದನ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿದ್ಯಾಶ್ರೀ ಪೋಷಕರು ಆರೋಪಿಸಿದ್ದಾರೆ.

ಪೋಷಕರ ದೂರಿನ ಆಧಾರದಲ್ಲಿ ಪೊಲೀಸರು ಪಿಡಿಒ ಆನಂದ ಅವರನ್ನು ವಶಕ್ಕೆ ಪಡೆದು, ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಿಡಿಒ ಆನಂದ ಮತ್ತು ವಿದ್ಯಾಶ್ರೀ ದಂಪತಿ ಬೆಳಗಾವಿ ನಗರದ ಬಸ್ತೀಪುರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. 2019ರಲ್ಲಿ ಮದುವೆಯಾಗಿದ್ದ ಈ ದಂಪತಿಗೆ ಒಂಬತ್ತು ತಿಂಗಳ ಹೆಣ್ಣುಮಗು ಇದೆ.

ವರದಕ್ಷಿಣೆ ಕಿರುಕುಳ, ಶೀಲದ ಬಗ್ಗೆ ಶಂಕೆ : ಆನಂದ ಶ್ಯಾಮ ಕಾಂಬ್ಳೆ ಅವರು ಮದ್ಯಪಾನ ಮಾಡಿ ವಿದ್ಯಾಶ್ರೀ ಅವರೊಂದಿಗೆ ಜಗಳವಾಡುತ್ತಿದ್ದರು. ತವರು ಮನೆಯಿಂದ ವರದಕ್ಷಿಣೆ ತರುವಂತೆಯೂ ಪೀಡಿಸುತ್ತಿದ್ದರು. ವಿದ್ಯಾಶ್ರೀ ಅವರ ಶೀಲದ ಬಗ್ಗೆ ಶಂಕೆಯನ್ನೂ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಆನಂದ ಅವರು ವಿದ್ಯಾಶ್ರೀ ತಂದೆ ಚಿದಾನಂದ ಅವರಿಗೆ ಕರೆ ಮಾಡಿ, ನಿಮ್ಮಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶವವನ್ನು ಗ್ರಾಮಕ್ಕೆ ತರುತ್ತೇನೆ ಎಂದು ಹೇಳಿದ್ದರು. ಆಗ ತಂದೆ ಬೇಡ, ತಾವೇ ಅಲ್ಲಿಗೆ ಬರುವುದಾಗಿ ಹೇಳಿ ಊರಿನಿಂದ ಹೊರಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿದಾನಂದ ಅವರು ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಮನೆಗೆ ಭೇಟಿ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ನೇಣು ಬಿಗಿದ ರೀತಿಯಲ್ಲಿ ಶವ ಇತ್ತು. ಮಧ್ಯಾಹ್ನ 12 ಗಂಟೆಗೆ ಚಿದಾನಂದ ಅವರು ನಗರಕ್ಕೆ ತಲುಪಿದ ನಂತರ ಮೃತದೇಹವನ್ನು ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

WhatsApp
Facebook
Telegram
error: Content is protected !!
Scroll to Top