ಹಿಜಾಬ್ ಪ್ರಕರಣದಲ್ಲಿ “ಕಾಣದ ಕೈಗಳು” ಕೆಲಸ ಮಾಡಿದ್ದು ಸತ್ಯ ಎಂದ ಹೈಕೋರ್ಟ್!

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಪ್ರಕರಣದ (Hijab Issue) ಕುರಿತಾಗಿ ಮಹತ್ವದ ತೀರ್ಪು ಪ್ರಕಟಿಸಿರುವ ಕರ್ನಾಟಕ ಹೈ ಕೋರ್ಟ್ (Karnataka High Court), ಕೆಲವೊಂದು ಕುತೂಹಲಕಾರಿ ಅಂಶಗಳನ್ನೂ ಬೆಳಕಿಗೆ ತಂದಿದೆ. ರಾಜ್ಯದಲ್ಲಿ ಹಿಜಾಬ್ ನ ಇಡೀ ಪ್ರಕರಣ ತೆರೆದುಕೊಂಡ ರೀತಿಯನ್ನು ಗಮನಿಸಿರುವ ಕೋರ್ಟ್, ಸಾಮಾಜಿಕ ಅಶಾಂತಿ (social unrest) ಮತ್ತು ಅಸಂಗತತೆಯನ್ನು (disharmony)ರೂಪಿಸಲು ಕೆಲವು “ಕಾಣದ ಕೈಗಳು” ಕೆಲಸ ಮಾಡಿವೆ ಎನ್ನುವುದನ್ನೂ ನಂಬಬೇಕಾಗಿದೆ ಎಂದು ಹೇಳಿದೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ( Chief Justice Ritu Raj Awasthi ), ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ( Justice Krishna S Dixit ) ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ( Justice JM Khazi ) ಅವರನ್ನೊಳಗೊಂಡ ಪೀಠವು ಹಿಜಾಬ್ ಅನ್ನು ಪ್ರಶ್ನಿಸುವ ವಿವಿಧ ಅರ್ಜಿಗಳನ್ನು ವಜಾಗೊಳಿಸುವ ವೇಳೆ ಈ ಅಭಿಪ್ರಾಯವನ್ನು ನೀಡಿದೆ.
“ಹಿಜಾಬ್ ಪ್ರಕರಣ ತೆರೆದುಕೊಂಡ ವಿಧಾನವು ಸಾಮಾಜಿಕ ಅಶಾಂತಿ ಮತ್ತು ಅಸಂಗತತೆಯನ್ನು ಹುಟ್ಟಿಹಾಕಲು ಕೆಲವು ಕಾರಣದ ಕೈಗಳು ಕೆಲಸ ಮಾಡಿವೆ ಎನ್ನುವ ವಾದಕ್ಕೆ ಅವಕಾಶ ನೀಡಿದೆ” ಎಂದು ಕರ್ನಾಟಕ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಠಾತ್ ಅಗಿ ಹಿಜಾಬ್ ಎನ್ನುವ ವಿಚಾರ ಉದ್ಭವಿಸಲು ಹೇಗೆ ಸಾಧ್ಯ. ಇದು ಕೆಲ ದಿನಗಳಲ್ಲಿಯೇ ವ್ಯಾಪಕವಾಗಿ ಪ್ರಚಾರ ಪಡೆದುಕೊಂಡಿರುವ ರೀತಿಯೂ ನಮಗೆ ದಿಗ್ಭ್ರೆಮೆ ಮೂಡಿಸಿದೆ ಎಂದು ಹೇಳಿದೆ.

ಹೆಚ್ಚಾಗಿ ಎಲ್ಲವನ್ನೂ ನಿರ್ದಿಷ್ಟವಾಗಿ ಹೇಳುವ ಅಗತ್ಯವಿಲ್ಲ. ಇದು ನಡೆಯುತ್ತಿರುವ ಪೊಲೀಸ್ ತನಿಖೆಯ ಮೇಲೆ ಪರಿಣಾಮ ಬೀರಬಾರದು. ಆ ಕಾರಣಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮುಚ್ಚಿದ ಕವರ್ ನಲ್ಲಿ ಪೊಲೀಸರು ಸಲ್ಲಿಸಿರುವ ಅಂಶಗಳನ್ನು ಪರಿಶೀಲನೆ ಮಾಡಿದ್ದು, ತನಿಖೆ ನಡೆಸುವ ನಿಟ್ಟಿನಲ್ಲಿ ಅವರಿಗೆ ಮತ್ತೆ ಹಿಂದುರಿಗಿಸಲಾಗಿದೆ ಎಂದಿದೆ. ಈ ವಿಷಯದ ಕುರಿತು ತ್ವರಿತ ಮತ್ತು ಪರಿಣಾಮಕಾರಿ ತನಿಖೆಯನ್ನು ನ್ಯಾಯಾಲಯ ಆಪೇಕ್ಷೆ ಮಾಡುತ್ತದೆ. ಅಪರಾಧಿಗಳನ್ನು ಯಾವುದೇ ವಿಳಂಬವಿಲ್ಲದೆ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ನಂಬಿದ್ದೇವೆ ಎಂದು ಹೇಳಿದೆ.

ಉಡುಪಿಯ ( Udupi ) ಪ್ರಿ-ಯೂನಿವರ್ಸಿಟಿ ಕಾಲೇಜಿನ ಅರ್ಜಿದಾರರ ಪರವಾಗಿ ಸಲ್ಲಿಸಿದ ಸಲ್ಲಿಕೆಗಳು ಮತ್ತು ದಾಖಲೆಯಲ್ಲಿ ಇರಿಸಲಾದ ವಿಷಯವನ್ನು ಕೂಡ ಕೋರ್ಟ್ ಗಮನಿಸಿದ್ದು “2004 ರಿಂದ ಡ್ರೆಸ್ ಕೋಡ್‌ನೊಂದಿಗೆ ಎಲ್ಲವೂ ಚೆನ್ನಾಗಿತ್ತು ಎನ್ನುವುದನ್ನು ಕೋರ್ಟ್ ಗಮನಿಸಿದೆ” ಎಂದು ಹೇಳಿದೆ.

ಅಷ್ಟಮಠಗಳ ಸಂಪ್ರದಾಯದ (ಉಡುಪಿ ಎಂಟು ಮಠಗಳು ನೆಲೆಗೊಂಡಿರುವ ಸ್ಥಳ) ಹಬ್ಬಗಳಲ್ಲಿ ಮುಸ್ಲಿಮರೂ ಸಹ ಪಾಲ್ಗೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠವು ಫೆಬ್ರವರಿ 10 ರಂದು ದೈನಂದಿನ ಆಧಾರದ ಮೇಲೆ ವಿಚಾರಣೆಯನ್ನು ಪ್ರಾರಂಭಿಸಿದ್ದಲ್ಲದೆ, ಮತ್ತು ಫೆಬ್ರವರಿ 25 ರಂದು ಆದೇಶವನ್ನು ಕಾಯ್ದಿರಿಸಿತ್ತು.
ಈ ವರ್ಷದ ಜನವರಿಯಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜು ಹಿಜಾಬ್ ಧರಿಸಿದ ಆರು ಹುಡುಗಿಯರಿಗೆ ಪ್ರವೇಶ ನಿರ್ಬಂಧಿಸಿದ್ದಾಗ ಹಿಜಾಬ್ ಗಲಾಟೆ ಆರಂಭವಾಗಿತ್ತು. ಇದರ ಬೆನ್ನಲ್ಲಿಯೇ ಪ್ರವೇಶ ನಿರಾಕರಿಸಿದ್ದಕ್ಕಾಗಿ ಹುಡುಗಿಯರು ಕಾಲೇಜಿನ ಹೊರಗಡೆ ಧರಣಿ ಪ್ರಾರಂಭಿಸಿದ್ದರು. ಇದಾದ ನಂತರ ಉಡುಪಿಯ ಹಲವಾರು ಕಾಲೇಜುಗಳ ಹುಡುಗರು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಲು ಆರಂಭಿಸಿದರು. ನಂತರ ಈ ಪ್ರತಿಭಟನೆಯು ರಾಜ್ಯದ ಇತರ ಭಾಗಗಳಿಗೆ ಹರಡಿ, ಕರ್ನಾಟಕದ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಆಂದೋಲನಗಳಿಗೆ ಕಾರಣವಾಗಿತ್ತು.

WhatsApp
Facebook
Telegram
error: Content is protected !!
Scroll to Top