ಕೋಲಾರದಲ್ಲಿ ತಪ್ಪಿತು ಮಹಾ ದುರಂತ – ಕೂದಲೆಳೆ ಅಂತರದಲ್ಲಿ ನೂರಾರು ಜನ ಪಾರು..!

ಕೋಲಾರ: ರಾಜ್ಯದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ರೈಲು ದುರಂತದಿಂದ ನೂರಾರು ಜನ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಾಲೂರಿನ ಟೇಕಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ತಾಂತ್ರಿಕ ದೋಷದಿಂದ ನಿಂತಿದ್ದ ರೈಲಿನಿಂದ ಇಳಿಯುತ್ತಿದ್ದ ಪ್ರಯಾಣಿಕರಿಗೆ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗುವ ಸಾಧ್ಯತೆ ಇತ್ತು. ಆದರೆ ರೈಲು ಬರುತ್ತಿದ್ದಂತೆ ಇನ್ನೊಂದು ಹಳಿಗೆ ಓಡಿದ್ದರಿಂದ ಜನ ಅಪಾಯದಿಂದ ಪಾರಾಗಿದ್ದಾರೆ.

ಇಂದು(ಬುಧವಾರ) ಬೆಳಗ್ಗೆ 8 ಗಂಟೆಗೆ ನಡೆದ ಈ ಘಟನೆಯಲ್ಲಿ ಕೆಜಿಎಫ್ ಮೂಲದ ವ್ಯಕ್ತಿ ಸಾವನ್ನಪ್ಪಿದ್ದು, 20 ಜನ ಗಾಯಗೊಂಡಿದ್ದಾರೆ. ರೈಲ್ವೇ ಅಧಿಕಾರಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ನಡೆದಿದ್ದು ಏನು?
ಬೆಂಗಳೂರಿನ ವೈಟ್ ಫೀಲ್ಡ್‍ನಲ್ಲಿ ತಾಂತ್ರಿಕ ದೋಷವಾಗಿದ್ದರಿಂದ ಸಿಗ್ನಲ್ ತೊಂದರೆ ಉಂಟಾಗಿತ್ತು. ಇದರಿಂದಾಗಿ ತೆರಕಲ್ಲು ಮತ್ತು ಮಾಲೂರಿನಲ್ಲಿ ರೈಲುಗಳು ಅಲ್ಲಲ್ಲೇ ನಿಂತಿತ್ತು. ಈ ವೇಳೆ ಪ್ಯಾಸೆಂಜರ್ ರೈಲಿನಿಂದ ಇಳಿದು ಪಕ್ಕದ ಹಳಿಯ ಕಡೆ ಪ್ರಯಾಣಿಕರು ನಡೆದುಕೊಂಡು ಹೋಗುತ್ತಿದ್ದರು.

ಈ ಸಂದರ್ಭದಲ್ಲೇ ಶತಾಬ್ದಿ ರೈಲು ವೇಗವಾಗಿ ಬಂದಿದೆ. ರೈಲು ಬರುತ್ತಿರುವುದನ್ನು ಗಮನಿಸಿ ಅಲ್ಲಿದ್ದ ಜನ ಚೆಲ್ಲಾಪಿಲ್ಲಿಯಾಗಿದ್ದಾರೆ. ಒಂದು ವೇಳೆ ಅವರು ಅಲ್ಲಿಂದ ಓಡದೇ ಹೋಗದೇ ಇದ್ದಿದ್ದರೆ ನೂರಾರು ಜನರು ರೈಲಿಗೆ ಬಲಿಯಾಗಬೇಕಾಗುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿ ನಾರಾಯಣ ಸ್ವಾಮಿ ಈ ಕುರಿತು ಮಾತನಾಡಿದ್ದು, ಮರಿಕೊಪ್ಪಮ್ ರೈಲು ಮಾಲೂರಿನಲ್ಲಿ ನಿಂತಿತ್ತು. ನಂತರ ನಮಗೆ ತಾಂತ್ರಿಕ ದೋಷದಿಂದ ರೈಲುಗಳು ಬರುತ್ತಿಲ್ಲ ಅಲ್ಲಲ್ಲೇ ನಿಂತಿದೆ ಎಂದು ತಿಳಿಯಿತು. ಅದಕ್ಕೆ ನಾವು 30 ನಿಮಿಷ ಅಲ್ಲೇ ಇದ್ದೆವು. ಏಕೆಂದರೆ ಅಲ್ಲಿ ಯಾವುದೇ ಬಸ್ ಸಹ ಇರಲಿಲ್ಲ. ಇಲ್ಲಿ ಬಸ್‍ಗಳು ತುಂಬಾ ಕಡಿಮೆ ಇತ್ತು. ಈ ವೇಳೆ ಕೋಲಾರದಿಂದ ಡೀಸೆಲ್ ರೈಲು ಬರುತ್ತೆ ಎಂಬ ಮಾಹಿತಿ ಸಿಕ್ಕಿತು. ಅದರಲ್ಲಿ ನನ್ನ ಸ್ನೇಹಿತ ಸಂತೋಷ ಸಹ ಇದ್ದರು ಎಂದು ವಿವರಿಸಿದರು.

ನಾನು ನನ್ನ ಸ್ನೇಹಿತನಿಗೆ ಕರೆ ಮಾಡಿ ಕೇಳಿದಕ್ಕೆ ಅವರು ಬಂಗಾರ ಪೇಟೆಯಿಂದ ರೈಲು ಹೊರಟಿದೆ ಎಂದು ತಿಳಿಸಿದ. ಆ ರೈಲು ಇನ್ನೊಂದು ಫ್ಲಾಟ್‍ಫಾರಂಗೆ ಬರುತ್ತೆ ಎಂದು ನಮಗೆ ತಿಳಿಯಿತು. ಈ ನಡುವೆ ಟ್ರ್ಯಾಕ್ ಇದೆ. ಅದೇ ಟ್ರ್ಯಾಕ್‍ನಲ್ಲಿ ಶತಾಬ್ದಿ ರೈಲು ಹೋಗುತ್ತಿತ್ತು. ಆದರೆ ನಮಗೆ ಡೀಸೆಲ್ ರೈಲು ಬರುತ್ತೆ ಎಂದು ಎಲ್ಲ ಜನ ಪಕ್ಕದ ಹಳಿಗೆ ಹೋಗುತ್ತಿದ್ದರು. ನಾನು ಸಹ ಅಲ್ಲೇ ಇದ್ದೆ. ಈ ವೇಳೆ ಎರಡೇ ನಿಮಿಷಕ್ಕೆ ಶತಾಬ್ದಿ ವೇಗವಾಗಿ ಬಂದಿದೆ.

ರೈಲು ಬರುತ್ತಿದ್ದಂತೆ ಎಲ್ಲರೂ ಕಿರುಚಲು ಪ್ರಾರಂಭಿಸಿದ್ದಾರೆ. ತಕ್ಷಣ ವೇಗವಾಗಿ ಪಕ್ಕದ ಹಳಿಗೆ ಬಂದ್ದೆವು. ಆದರೆ ಅಲ್ಲಿ 20 ರಿಂದ 30 ಜನರು ಸಿಕ್ಕಿಕೊಂಡಿದ್ದರು. ಏನೂ ಸಾಹಸ ಮಾಡಿ ಎಲ್ಲರೂ ತಪ್ಪಿಸಿಕೊಂಡು ಬಂದಿದ್ದರು. ಒಬ್ಬ ಯುವಕ ಮಾತ್ರ ಸಾವನ್ನಪ್ಪಿದ್ದಾನೆ. ಕೆಲವರು 3 ಜನ ಮೃತಪಟ್ಟಿದ್ದಾರೆ ಎಂದು ಹೇಳುತ್ತಾರೆ. ಆದರೆ ನಾವು ಒಬ್ಬನನ್ನೆ ನೋಡಿದ್ದು ಎಂದು ತಿಳಿಸಿದರು. 

ಅಧಿಕಾರಿಗಳ ನಿರ್ಲಕ್ಷ್ಯ
ಯಾವ ರೈಲು ಎಷ್ಟು ಸಮಯಕ್ಕೆ ನಿಲ್ದಾಣಕ್ಕೆ ಬರುತ್ತದೆ ಎನ್ನುವ ವಿವರ ಅಧಿಕಾರಿಗಳಿಗೆ ತಿಳಿದಿರುತ್ತದೆ. ಆದರೆ ಅಧಿಕಾರಿಗಳು ಶತಾಬ್ದಿ ರೈಲು ಬರುತ್ತಿರುವ ವಿಚಾರವನ್ನು ಅಲ್ಲಿದ್ದ ಪ್ರಯಾಣಿಕರಿಗೆ ತಿಳಿಸಿರಲಿಲ್ಲ. ರೈಲು ಬರುತ್ತಿರುವ ಶಬ್ಧ ಕೇಳಿ ಜನ ದಿಕ್ಕಾಪಾಲಾಗಿ ಓಡಿದ್ದರಿಂದ ಹಲವರ ಜೀವ ಉಳಿದಿದೆ.

WhatsApp
Facebook
Telegram
error: Content is protected !!
Scroll to Top