ಕುಡಿಯುವ ನೀರಿಗಾಗಿ 55 ಅಡಿ ಬಾವಿ ತೆಗೆದ ವೃದ್ಧ ದಂಪತಿ.!

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮ ಪಂಚಾಯಿತಿಗೆ ಸೇರಿದ ಜನ್ನಾಪುರದ ಅಣಜೂರಿನಲ್ಲಿ ಕಡುಬಡತನದ ನಡುವೆ ಜೀವಿಸುತ್ತಿರುವ ರಾಜು (65) ಹಾಗೂ ಶಾರದ (60) ದಂಪತಿ ಕುಡಿಯುವ ನೀರಿಗಾಗಿ ಸುಮಾರು ಒಂದೂವರೆ ತಿಂಗಳಿಂದ 55 ಅಡಿ ಬಾವಿ(Well) ತೋಡಿದ್ದಾರೆ. ಕೂಲಿ ಕೆಲಸ ಮಾಡುವ ಈ ದಂಪತಿ ಕೆಲಸದ ಬಿಡುವಿನ ಸಮಯದಲ್ಲಿ ಶ್ರಮವಹಿಸಿ ಬಾವಿ ತೋಡಿದ್ದಾರೆ.

ವಿಷಯ ಅರಿತು ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರೊಂದಿಗೆ ದಂಪತಿ(Couple) ತಮ್ಮ ಸಂಕಷ್ಟಗಳನ್ನು ತೆರೆದಿಟ್ಟರು. 20 ವರ್ಷಗಳ ಹಿಂದೆ ನಮಗೆ ವಾಸಿಸಲು ಸರ್ಕಾರ(Government of Karnataka) ಹಕ್ಕುಪತ್ರವನ್ನು ವಿತರಣೆ ಮಾಡಿದ್ದು ಸರಿಯಷ್ಟೇ. ಆದರೆ, ನಾವು ಅನಕ್ಷರಸ್ಥರಾದ(Illiterate) ಕಾರಣ ನಮಗೆ ಮನೆ ಕಟ್ಟಲು ಇದುವರೆಗೂ ಆಶ್ರಯ ಮನೆ ನೀಡಿಲ್ಲಾ, ನಾವು 20 ವರ್ಷಗಳಿಂದಲೂ ಟಾರ್ಪಲ್‌ ಹಾಕಿಕೊಂಡು ಗಾಳಿ ಮಳೆ ಎನ್ನದೆ ವಾಸಿಸುತ್ತಿದ್ದೇವೆ ಎನ್ನುತ್ತಾರೆ.

ಹಗಲಲ್ಲಿ ಮಾತ್ರ ಬೆಳಕು. ರಾತ್ರಿ ಸೀಮೆಎಣ್ಣೆ ಬುಡ್ಡಿ ಹಚ್ಚಿಕೊಳ್ಳಲು ಸರ್ಕಾರ ಸೀಮೆಎಣ್ಣೆಯನ್ನು ನೀಡುತ್ತಿಲ್ಲ. ಮುಖ್ಯ ರಸ್ತೆಯ ಬದಿಯಲ್ಲಿದ್ದರೂ ಕಾಡುಜನರಂತೆ ಬದುಕುವ ಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೂ(Drinking Water) ತೊಂದರೇ ಅನುಭವಿಸಬೇಕಾಗಿದೆ. ಗ್ರಾಪಂಗೆ ಮಾಡಿದ ಮನವಿಗಳಿಗೆ ಸ್ಪಂದನೆ ದೊರೆತಿಲ್ಲ. ನಾವು ಅನಕ್ಷರಸ್ಥರಾಗಿರುವ ಕಾರಣ ನಮಗೆ ಯಾರನ್ನು ಕಾಣಬೇಕೆಂದು ಗೊತ್ತಿಲ್ಲಾ ಸ್ವಾಮಿ. ಹಾಗಾಗಿ ಕುಡಿಯುವ ನೀರಿಗಾಗಿ ನಾವಿಬ್ಬರೇ ಜನವರಿ 14ರಿಂದ ಬಾವಿ ತೆಗೆಯಲು ಪ್ರಾರಂಭಿಸಿದ್ದೆವೆ. ಇದುವರೆಗೂ 55 ಅಡಿ ಬಾವಿಯನ್ನು ತೆಗೆದಿದ್ದೇವೆ. ಇನ್ನು ನೀರು ಸಿಕ್ಕಿಲ್ಲ. ನೀರು ಸಿಕ್ಕುವ ತನಕ ಬಾವಿತೆಗೆದೇ ತೀರುತ್ತೇವೆ ಎಂದು ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂತಹವರನ್ನು ಮನಕಲುಕುವಂತಿತ್ತು.

ಮೀಸಲು ಕ್ಷೇತ್ರವಾದ ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕರ ಕಣ್ಣಿಗೆ ಇಂಥವರು ಕಾಣಲಿಲ್ಲವೇ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ವೋಟು ಪಡೆಯುವಾಗ ಮಾತ್ರ ಕಣ್ಣಿಗೆ ಕಾಣಿಸುವ ಶಾಸಕರು ವೋಟು ಪಡೆದ ನಂತರ ನಾಪತ್ತೆಯಾಗಿದ್ದಾರೆ ಎಂದು ಗ್ರಾಮಸ್ಥರು ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಪಂ ಇಒ ಸ್ಪಂದನೆ:

ತಕ್ಷಣವೇ ಮಾಧ್ಯಮದವರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಡಿ.ಪ್ರಕಾಶ್‌ ಗಮನಕ್ಕೆ ವಿಷಯ ತಂದರು. ಆಗ ಸ್ಥಳಕ್ಕೆ ಆಗಮಿಸಿದ ಅವರು ಅಲ್ಲಿಯ ವಾಸ್ತವಿಕತೆ ನೋಡಿ ಮಮ್ಮಲ ಮರುಗಿದರು. ತಕ್ಷಣವೇ ಚಿನ್ನಿಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕರೆಸಿ ಕುಡಿಯುವ ನೀರಿನ ವ್ಯವಸ್ಥೆ ತಕ್ಷಣವೇ ಮಾಡುವಂತೆ ಸೂಚನೇ ನೀಡಿದರು. 20 ವರ್ಷಗಳಿಂದಲೂ ವಾಸಿಸುತ್ತಿರುವ ರಾಜು ಅವರಿಗೆ ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಲು ತಹಸೀಲ್ದಾರರೊಂದಿಗೆ ಚರ್ಚಿಸಿ ಮನೆ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ನೀರಿನ ವ್ಯವಸ್ಥೆ ಬಗ್ಗೆ ಸರಿಯಾಗಿ ಗಮನಿಸುವಂತೆ ತಿಳಿಸಿದರು.

ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಅಪ್ಪ- ಅಮ್ಮನ ಕಷ್ಟ ನೋಡಲಾರದೆ ಮಂಗಳೂರಿನಲ್ಲಿ(Mangaluru) ಮನೆ ಕೆಲಸ ಹಾಗೂ ಹೋಟೆಲ್‌ ಕೆಲಸ ಮಾಡಿ ಬಂದ ಹಣದಲ್ಲಿ ವಿದ್ಯಾಭ್ಯಾಸ(Study) ಮಾಡುತ್ತಿದ್ದಾರೆ.

ಪತ್ನಿ ಕಷ್ಟ ನೋಡಲಾಗದೆ 15 ದಿನದಲ್ಲೇ ಬಾವಿ ತೋಡಿದ ಪತಿ!

ಗುಣ: ಪ್ರತೀ ನಿತ್ಯ ಅರ್ಧ ಕಿ.ಮೀ ದೂರದ ಬೋರ್‌ವೆಲ್‌ನಿಂದ ನೀರು ತರುವ ಪತ್ನಿಯ ಕಷ್ಟನೋಡಲಾಗದ ಪುಣ್ಯಾತ್ಮ ಪತಿರಾಯನೋರ್ವ 15 ದಿನಗಳಲ್ಲಿ ಮನೆಯ ಸಮೀಪವೇ ಬಾವಿ ತೋಡಿದ ಯಶೋಗಾಥೆಯೊಂದು ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ.

ಬಡ ಕೂಲಿ ಕಾರ್ಮಿಕನ ಈ ಮಹತ್ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಡಳಿತ ಕಾರ್ಮಿಕ ಕುಟುಂಬದ ಜೀವನ ಸುಧಾರಣೆಗಾಗಿ ಸರ್ಕಾರದ ಕೆಲವು ಯೋಜನೆಗಳನ್ನು ನೀಡಲು ನಿರ್ಧರಿಸಿದೆ. ಗುಣ ಜಿಲ್ಲೆಯ ಚಂಚೋಡಾ ತಾಲೂಕಿನ ಭಾನ್‌ಪುರ ಬಾವ ಗ್ರಾಮದ ನಿವಾಸಿ ಭರತ್‌ ಸಿಂಗ್‌(46) ಪತ್ನಿಗಾಗಿ 15 ದಿನಗಳಲ್ಲೇ 6 ಅಡಿ ಅಗಲ ಮತ್ತು 31 ಅಡಿ ಉದ್ದದ ಬಾವಿ ತೋಡಿ ಜಿಲ್ಲಾಡಳಿತದಿಂದ ಭೇಷ್‌ ಎನಿಸಿಕೊಂಡ ಸಾಹಸ್ಸಿಗ.

WhatsApp
Facebook
Telegram
error: Content is protected !!
Scroll to Top