ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್.!

ರಾಜ್ಯ(ಚಿಕ್ಕೋಡಿ): ನಾಲ್ಕು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದ ಬಿಎಸ್‍ಎಫ್ ಯೋಧ ಮಾನಸಿಕ ಅಸ್ವಸ್ಥನಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಸತ್ಯಪ್ಪ ಸಿದ್ದಪ್ಪ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾನೆ. ಬಳಿಕ ತನ್ನ ಮೇಲೆಯೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಸತ್ಯಪ್ಪ ವೈಯಕ್ತಿಕವಾಗಿ ತುಂಬಾ ಸಾಲ ಮಾಡಿಕೊಂಡಿದ್ದನು. ಅಲ್ಲದೆ ಕೌಟುಂಬಿಕ ವಿಚಾರದಲ್ಲಿಯೂ ನೆಮ್ಮದಿ ಇಲ್ಲದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಈ ಹಿನ್ನೆಲೆ ಅವನಿಗೆ ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು ಎಂಬ ಮಾಹಿತಿ ಸಹ ತಿಳಿದುಬಂದಿದೆ.

ಕಾರಣವೇನು?


ಕಳೆದ ವರ್ಷ ಅಂದಾಜು 10 ಲಕ್ಷ ರೂ. ಸಾಲ ಮಾಡಿದ್ದ ಸತ್ಯಪ್ಪ ಸಾಲ ಮರಳಿ ಪಾವತಿಸುವ ಚಿಂತೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ. ಅವನ ವರ್ತನೆ ಕಂಡು ಕುಟುಂಬಸ್ಥರು ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಮಾನಸಿಕ ವೈದ್ಯರಿಂದ ಕೌನ್ಸಲಿಂಗ್ ಕೂಡ ಮಾಡಿಸಿದ್ದರು. ನಂತರ ಯೋಧ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್‍ಎಫ್ ಕಚೇರಿಗೂ ಈ ಕುರಿತು ವರದಿಗಳನ್ನು ನೀಡಲಾಗಿತ್ತು.

ಇಷ್ಟೆಲ್ಲ ವರದಿ ನೀಡಿದರೂ ಬಿಎಸ್‍ಎಫ್ ಅಧಿಕಾರಿಗಳು ಮರಳಿ ಸತ್ಯಪ್ಪನನ್ನ ಕಾರ್ಯ ನಿಯೋಜನೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮತ್ತೆ ರಜೆ ನೀಡುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ರಜೆ ನೀಡದ್ದಕ್ಕೆ ಸತ್ಯಪ್ಪ ಮಾನಸಿಕವಾಗಿ ನೊಂದಿದ್ದ ಎನ್ನುವ ಮಾಹಿತಿಯನ್ನು ಮೃತ ಯೋಧನ ಸಂಬಂಧಿಗಳು ನೀಡಿದ್ದಾರೆ.

ಮಾನಸಿಕ ಅಸ್ವಸ್ಥವಾಗಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ಸತ್ಯಪ್ಪ ಭಾನುವಾರ ಪಂಜಾಬ್‍ನ ಅಮೃತಸರ ಅಟ್ಟಾರಿ ಗಡಿಯ ಖೇಸರ್ ಕ್ಯಾಂಪ್ ನಲ್ಲಿ ನಾಲ್ಕು ಯೋಧರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಮೃತ ಯೋಧನ ಪಾರ್ಥಿವ ಶರೀರದ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

WhatsApp
Facebook
Telegram
error: Content is protected !!
Scroll to Top