ಕಾರವಾರ: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ನಲ್ಲಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೆ ಹೆಚ್ಚಿನ ಯೋಜನೆ ಘೋಷಣೆ ಮಾಡಿದ್ದಾರೆ.
ಅಂಕೋಲ ತಾಲೂಕಿನ ತದಡಿ ಬಂದರಿನಲ್ಲಿ ಸಮಗ್ರ ಪರಿಸರ ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದ ಆಳ ಸಮುದ್ರದ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಸಂಯೋಜನೆಯೊಂದಿಗೆ 100 ಆಳ ಸಮುದ್ರ ಮೀನುಗಾರಿಕೆ ಹಡಗುಗಳಿಗೆ ನೆರವು ನೀಡಲು ಮತ್ಸ್ಯ ಸಿರಿ ಯೋಜನೆ ಅನುಷ್ಠಾನ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಂದು ನಾರಾಯಣಗುರು ವಸತಿ ಶಾಲೆ ಪ್ರಾರಂಭ. ಕರಾವಳಿಯಲ್ಲಿ ಸಾಗರಮಾಲಾ ಯೋಜನೆಯಡಿ 1880 ಕೋಟಿ ವೆಚ್ಚದಲ್ಲಿ 24 ಯೋಜನೆ ಅನುಷ್ಠಾನ ಹಾಗೂ ಕಾರವಾರ ಬಂದರು ವಿಸ್ತರಣೆ ಘೋಷಣೆ ಮಾಡಲಾಗಿದೆ. ಕಾರವಾರದ ಮಾಜಾಳಿಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 250 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಂದರು ನಿರ್ಮಾಣಕ್ಕೆ ಹಣ ಮಂಜೂರು. ಅಂಕೋಲದ ಬೇಲಿಕೇರಿ-ಕೇಣಿಯಲ್ಲಿ ಗ್ರೀನ್ ಫೀಲ್ಡ್ ಬಂದರು ಅಭಿವೃದ್ಧಿ ಘೋಷಣೆ ಮಾಡಲಾಗಿದೆ.