ರಾಜ್ಯ(ಹುಬ್ಬಳ್ಳಿ ): ಗೆಳೆತನ (Friendship) ಎಂದರೆ ಜೀವಕ್ಕೆ ಜೀವ ಎನ್ನುವವರರನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬಳು ದೋಸ್ತಿ ಹೆಸರಲ್ಲಿ ದೋಖಾ ಮಾಡಿದ್ದು, ಗೆಳತನ ನಂಬಿ ಕೆಟ್ಟೆನಲ್ಲಾ ಅಂತ ಮಹಿಳೆ ನ್ಯಾಯಾಲಯದ (Court) ಮೊರೆ ಹೋಗುವಂತಾಗಿದೆ. ಮಹಿಳೆಯೊಬ್ಬಳಿಗೆ ಈಕೆ ಬರೋಬ್ಬರಿ 40 ಲಕ್ಷ ರೂಪಾಯಿ ಮೋಸ (Cheating) ಮಾಡಿದ್ದಾಳೆ ಎನ್ನಲಾಗಿದ್ದು, ಹಲವಾರು ಮಹಿಳೆಯರಿಗೂ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದು, ಮೋಸ ಹೋದವರು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ವಾಣಿಜ್ಯ ನಗರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಮುಗ್ದರನ್ನು ವಂಚಿಸುವುದೇ ಒಂದು ಉದ್ಯೋಗವಾಗಿದೆ. ಗೆಳೆತನದ ಹೆಸರಲ್ಲಿ ಮಹಿಳೆಯಿಂದಲೇ ಮಹಿಳೆಗೆ ಈ ಮೋಸ ನಡೆದಿದೆ. ಹಾಗಿದ್ದರೇ ಏನಿದು ಮೋಸ. ಮೋಸ ಮಾಡುವಷ್ಟು ಸ್ನೇಹಿತೆಯನ್ನು ನಂಬಿಸಿದ್ದಳಾ, ಆಕೆ ನಡುವಳಿಕೆ ಈಕೆಗೆ ಅನುಮಾನವೇ ತರಿಸಲಿಲ್ಲವಾ ಎಂಬ ಕಥೆ ಇಲ್ಲಿದೆ
ಗೆಳೆತನ ಜೊತೆಗೆ ವ್ಯವಹಾರ ಲಾಭ
ಹೀಗೆ ಕೈಯಲ್ಲಿ ಕಾಗದ ಪತ್ರವನ್ನು ಹಿಡಿದುಕೊಂಡು ಕಣ್ಣೀರು ಹಾಕುತ್ತಿರುವ ಮಹಿಳೆಯ ಹೆಸರು ಗಂಗಮ್ಮ ಸಂಶಿ. ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿ ವಾಸ ಮಾಡುತ್ತಿರುವ ಇವರು ವಿದ್ಯಾನಗರದ ಅಕ್ಷಯ ಕಾಲೋನಿಯ ಶೋಭಾ ಅವರಿಂದ ನವಲಗುಂದ ಅವರಿಂದ ವಂಚನೆಗೆ ಒಳಗಾಗಿದ್ದಾರೆ. ಕಳೆದ 2018 ರಿಂದಲೂ ಶೋಭಾ ಅವರನ್ನು ನಂಬಿ ಹಲವು ವ್ಯವಹಾರ ನಡೆಸಿಕೊಂಡು ಬಂದಿದ್ದ ಶೋಭಾ ಅವರಿಗೆ ಗೆಳೆತನದ ಮರಳು ಮಾತುಗಳ ಜೊತೆಗೆ ವ್ಯವಹಾರದ ಲಾಭ ತೋರಿಸಿ 40 ಲಕ್ಷ ಮೋಸ ಮಾಡಿದ್ದಾರೆ
ಸಾಲ ಕೊಡಿಸುವುದಾಗಿ ನಂಬಿಸಿದ್ದ ಮಹಿಳೆ
ಖಾಸಗಿ ಬ್ಯಾಂಕ್ ವೊಂದರಿಂದ ಈಕೆಯ ಮನೆಯ ಮೇಲೆ ಸಾಲ ಕೊಡಿಸುವುದಾಗಿ ಶೋಭಾ ಬ್ಯಾಂಕಿಗೆ ಅರ್ಜಿ ಹಾಕಿಸಿದ್ದಾರೆ. ಆದರೆ ಗಂಗಮ್ಮ ಅವರಿಗೆ ಆ ಬ್ಯಾಂಕಿನಿಂದ ಯಾವುದೇ ಸಾಲ ಮಂಜೂರಾಗದ ಹಿನ್ನೆಲೆಯಲ್ಲಿ ಶೋಭಾ ತನ್ನ ಮನೆಯ ಮೇಲೆ ಸಾಲ ಕೊಡಿಸುವುದಾಗಿ ನಂಬಿಸಿದ್ದಾಳೆ. ಇದಕ್ಕೂ ಮುನ್ನ ಗಂಗಮ್ಮ ಅವರ ಮನೆಯನ್ನು ಸಾಲದ ಭದ್ರತೆಯ ನೆಪದಲ್ಲಿ ಗಂಗಮ್ಮ ಅವರಿಂದ ಮನೆಯ ಮಾರಾಟದ ಸಂಪೂರ್ಣ ಕರಾರು ಪತ್ರ ಬರೆಯಿಸಿಕೊಂಡಿದ್ದಾರೆ. ಆದರೆ ಕರಾರು ಪತ್ರ ಬರೆಯಿಸಿಕೊಂಡ ನಂತರ ಒಂದು ಬಿಡಿಗಾಸು ನೀಡದ ಶೋಭಾ, ಇದೀಗ 40 ಲಕ್ಷ ರೂಪಾಯಿ ಸಾಲ ತಿರುಗಿಸುವಂತೆ ಪೀಡಿಸುತ್ತಿದ್ದಾಳೆ ಎಂದು ಗಂಗಮ್ಮ ಆರೋಪಿಸಿದ್ದಾಳೆ.
ಲಕ್ಷ ಲಕ್ಷ ಪಡೆದು ಮೋಸ
ಕಳೆದ ಹಲವು ವರ್ಷಗಳಿಂದ ಚಿರಪರಿಚಿತಳಾಗಿರುವ ಶೋಭಾ ಇವರೊಂದಿಗೆ ಗಂಗಮ್ಮ ಹಲವಾರು ವ್ಯವಹಾರ ನಡೆಸಿದ್ದಾಳೆ. ಸಾಲದೆಂಬಂತೆ ತನ್ನ ಸ್ನೇಹಿತೆಯರಿಗೂ ಶೋಭಾಳನ್ನು ಪರಿಚಯ ಮಾಡಿಕೊಂಡಿದ್ದಾಳೆ. ಅದಾದ ನಂತರ ಶೋಭಾ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಅವರಿಂದ ಲಕ್ಷ ಲಕ್ಷ ರೂಪಾಯಿ ಪಡೆದು, ನಂತರ ಹಿಂದುರಿಗಿಸದೇ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಶೋಭಾ ಮಾಡುತ್ತಿರುವ ವಂಚನೆ ವಿರುದ್ಧ ಗಂಗಮ್ಮ ಸೇರಿ ಇತರೆ ಮಹಿಳೆಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮುಗ್ಧ ಅಸಹಾಯಕ ಜನರು ಇರುವವರೆಗೂ ಇಂತಹ ಮೋಸಗಾರರು ಇರುತ್ತಾರೆ ಎಂಬುದುಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಆಪ್ತ ಸ್ನೇಹಿತೆಯಂದು ನಂಬಿದ ಮಹಿಳೆ ಇದೀಗ ಕುಟುಂಬವನ್ನೇ ಬೀದಿಗೆ ತರುವಂತೆ ಮಾಡಿದ್ದಾರೆ. ತನಗೆ ಆಗಿರುವ ಅನ್ಯಾಯದಿಂದ ದಿಕ್ಕು ಕಾಣದಂತೆ ಆಗಿರುವ ಮಹಿಳೆ ಇದೀಗ ನ್ಯಾಯ ಕೊಡಿಸಿ ಎಂದು ಪೊಲೀಸ್ ಕಚೇರಿ, ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಆಕೆಗೆ ಸೂಕ್ತ ಶಿಕ್ಷೆ ಕೊಡಿಸಬೇಕು ಎಂದು ಮನವಿ ಮಾಡಿದ್ದಾಳೆ