ರಾಜ್ಯ(ಬೆಳಗಾವಿ): ತಾಲೂಕಿನ ಬೆಳಗುಂದಿಯಲ್ಲಿ ವ್ಯಕ್ತಿಯ ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿ ಮೂವರು ಅರೆಸ್ಟ್ ಆಗಿದ್ದಾರೆ. ವ್ಯಕ್ತಿಯನ್ನು ಹತ್ಯೆಗೈದಿದ್ದ ಪತ್ನಿ, ಆಕೆಯ ಪುತ್ರ ಮತ್ತು ಪುತ್ರನ ಸ್ನೇಹಿತ ಬಂಧನಕ್ಕೊಳಗಾದವರು. ಫೆಬ್ರವರಿ 26ರ ಮಧ್ಯರಾತ್ರಿ ಮೂವರು ಕತ್ತು ಕೋಯ್ದು ಗಜಾನನ ನಾಯ್ಕ್ನ ಹತ್ಯೆಗೈದಿದ್ದರು. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಎರಡು ಮದುವೆಯಾಗಿದ್ದ ಗಜಾನನನ್ನು ಇಬ್ಬರೂ ಪತ್ನಿಯರು ಬಿಟ್ಟು ಹೋಗಿದ್ದರು. ನಂತರ ಬೆಳಗುಂದಿ ಗ್ರಾಮದ ವಿದ್ಯಾ ಪಾಟೀಲ್ ಜೊತೆ ಪಾರ್ಟನರ್ಶಿಪ್ (Partnership) ಬೇಕರಿ ಆರಂಭಿಸಿದ್ದ. ಯಾರಿಗೂ ಗೊತ್ತಾಗದ ರೀತಿ ವಿದ್ಯಾ ಪಾಟೀಲ್ ಜೊತೆ ರಿಜಿಸ್ಟರ್ ಮ್ಯಾರೇಜ್ ಕೂಡಾ ಆಗಿದ್ದ.
ಮೃತ ಗಜಾನನ ನಾಯ್ಕ್ ವಿದ್ಯಾ ಪಾಟೀಲ್ ಹೆಸರಲ್ಲಿ ಮನೆ ಕಟ್ಟಿಸಿ ಕೊಟ್ಟಿದ್ದ. ಕಳೆದ ಮೂರು ವರ್ಷಗಳ ಹಿಂದೆ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಮಾಡಿದ್ದರು. ಆರ್ಥಿಕ ನಷ್ಟ ಹಿನ್ನೆಲೆ ಮನೆ ಮಾರಾಟ ಮಾಡಲು ವಿದ್ಯಾ ಪಾಟೀಲ್ಗೆ ಒತ್ತಾಯಿಸಿದ್ದ. ಇಲ್ಲವಾದರೆ ತನ್ನ ಜೊತೆ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಗಜಾನನ ನಾಯ್ಕ್ ಹತ್ಯೆಗೆ ವಿದ್ಯಾ ಪಾಟೀಲ್ ಸ್ಕೆಚ್ ಹಾಕಿದ್ದಳು.
ಫೆ.26ರ ರಾತ್ರಿ ಗಜಾನನ ನಾಯ್ಕ್ ಮನೆಗೆ ಬಂದಿದ್ದ ವಿದ್ಯಾ ಪಾಟೀಲ್, ಗಜಾನನಗೆ ಕಂಠಪೂರ್ತಿ ಮದ್ಯ ಕುಡಿಸಿ ಮಗನಿಗೆ ಕರೆ ಮಾಡಿದ್ದಾಳೆ. ಸ್ನೇಹಿತ ಪರಶುರಾಮ ಗೋಂದಳಿ ಜೊತೆ ಗಜಾನನ ಮನೆಗೆ ಬಂದಿದ್ದ ವಿದ್ಯಾ ಪಾಟೀಲ್ ಮಗ ಹೃತಿಕ್ ಪಾಟೀಲ್, ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಗಜಾನನ ಹತ್ಯೆ ಮಾಡಿ ಆತನ ಡೈರಿ, ಮೊಬೈಲ್ ಫೋನ್ ಜೊತೆ ಮೂವರು ಪರಾರಿಯಾಗಿದ್ದರು. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.