ಶಿವಮೊಗ್ಗದಲ್ಲಿ ವಾಕಿಂಗ್ ಹೊರಟಿದ್ದ ಹಿಂದೂ ಕಾರ್ಯಕರ್ತನ ಮೇಲೆ‌ ಕಲ್ಲು ತೂರಾಟ…!

ರಾಜ್ಯ(ಶಿವಮೊಗ್ಗ): ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ನಗರದ ಗೋಪಾಳದಲ್ಲಿ ನಡೆದಿದೆ. ಇದು ಸ್ಥಳೀಯರಲ್ಲಿ ಆತಂಕ ತಂದಿದೆ. ಘಟನೆಯಲ್ಲಿ ವೆಂಕಟೇಶ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ‌.

ನಿನ್ನೆ ರಾತ್ರಿ ಗೋಪಾಳದಲ್ಲಿ ವೆಂಕಟೇಶ್ ಅವರು ವಾಕಿಂಗ್ ಗೆಂದು ಹೋಗುತ್ತಿದ್ದರು. ಈ ವೇಳೆ ಯುವಕರ ಗುಂಪೊಂದು ವೆಂಕಟೇಶ್ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಗಾಯಗೊಂಡ ಅವರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಕಲ್ಲು ತೂರಿದ್ದರಿಂದಾಗಿ ವೆಂಕಟೇಶ್ ಅವರ ತಲೆಗೆ ಪೆಟ್ಟು ಬಿದ್ದಿದೆ. ಇನ್ನು ಕಲ್ಲು ತೂರಾಟ ನಡೆಸಿದ ಯುವಕರ ಗುಂಪು ವೆಂಕಟೇಶ್ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಓಡಿ ಹೋಗಿದ್ದಾರೆ.

ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟೇಶ್ ಅವರನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಭೇಟಿ ಮಾಡಿ ಘಟನೆಯ ಮಾಹಿತಿ ಪಡೆದುಕೊಂಡರು. ಈ ವೇಳೆ ಧೈರ್ಯ ತುಂಬಿದ ಅವರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ. ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಹರ್ಷ ಕೊಲೆ ನಂತರ ಶಿವಮೊಗ್ಗ ಶಾಂತಸ್ಥಿತಿಗೆ ಮರಳುತಿತ್ತು. ಈ ವೇಳೆ ಮತ್ತೊಮ್ಮೆ ಹಿಂದೂ ಕಾರ್ಯಕರ್ತನ‌ ಮೇಲೆ ದಾಳಿ ಆಗಿದೆ. ನಾಲ್ಕೈದು ಯುವಕರ ಗುಂಪೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ವೆಂಕಟೇಶ್ ಅಣ್ಣ ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತ. ಆದ್ರೆ ಈ ರೀತಿಯ ಹಲ್ಲೆ ನಡೆದಿರುವುದು ಆಘಾತ ತಂದಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಪತ್ತೆ ಹಚ್ಚಬೇಕಿದೆ. ಕಾನೂನಿನ ಮೇಲೆ ಭಯ ಇಲ್ಲದಂತೆ ವರ್ತಿಸುತ್ತಿದ್ದಾರೆ.

ದುಶ್ಚಟಗಳ ದಾಸರಾಗಿ ಅಥವಾ ಬೇರೆ ಯಾವುದೋ‌ ಕಾರಣಕ್ಕೋ ಎಂಬುದು ಗೊತ್ತಾಗಬೇಕಿದೆ. ಗಾಂಜಾ ನಶೆಯಲ್ಲಿ ಈ ರೀತಿ ಘಟನೆ ನಡೆದಿರಬಹುದು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕಿದೆ. ಇಂಥ ಹಲ್ಲೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಲಾಗುವುದು ಎಂದು ತಿಳಿಸಿದರು.

WhatsApp
Facebook
Telegram
error: Content is protected !!
Scroll to Top