ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ ಶಿವರಾತ್ರಿ ಫಲಾಹಾರ; ಧರ್ಮ ಭಾವೈಕ್ಯತೆಗೆ ಸಾಕ್ಷಿ ಕಲ್ಯಾಣ ಕರ್ನಾಟಕ..!

ರಾಜ್ಯ(ಕೊಪ್ಪಳ): ರಾಜ್ಯದಲ್ಲಿ ಈಗ ಧರ್ಮಗಳು, ಜಾತಿಗಳ ಮಧ್ಯೆ ವಿವಾದ. ಗಲಾಟೆಯಾಗುತ್ತಿದೆ. ಆದರೆ ಸೂಫಿ ಶರಣರ ನಾಡಾಗಿರುವ ಕೊಪ್ಪಳ ಜಿಲ್ಲೆಯಲ್ಲಿ (Koppal) ಧರ್ಮ ಯಾವುದೇ ಆಗಿರಲಿ. ನಾವೆಲ್ಲ ಒಂದೇ, ನಿಮ್ಮ ಹಬ್ಬಗಳನ್ನು ನಾವು ನಿಮ್ಮೊಂದಿಗೆ ಆಚರಿಸುತ್ತೇವೆ ಎಂಬಂತೆ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಹಿಂದೂ ಸ್ನೇಹಿತರಿಗೆ ಶಿವರಾತ್ರಿಯ ಹಬ್ಬದ ನಿಮಿತ್ತ ಉಪಹಾರ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದಾರೆ.

ಕೊಪ್ಪಳದ ಭಾಗ್ಯನಗರದಲ್ಲಿ ಫಕ್ರುದ್ದಿನ್ ಎಂಬುವವರು ಸ್ನೇಹಿತರಿಗಾಗಿ ಸಂಜೆ ವೇಳೆ ಉಪಹಾರ ವ್ಯವಸ್ಥೆ ಮಾಡಿದ್ದಾರೆ. ಸಾಮಾನ್ಯವಾಗಿ ಮಹಾ ಶಿವರಾತ್ರಿಯ ದಿನ (Maha Shivaratri 2022) ಹಿಂದೂಗಳು ಮುಂಜಾನೆಯಿಂದ ನಿರಾಹಾರ ಆಚರಣೆ ಮಾಡುತ್ತಾರೆ. ಇಡೀ ದಿನ ಉಪವಾಸವಿರುವವರು ಸಂಜೆ ವೇಳೆ ಹಣ್ಣು ಹಂಪಲ ತಿಂದು, ಉಪಹಾರ ಸೇವಿಸಿ ತಮ್ಮ ನಿರಾಹಾರ ವೃತವನ್ನು (Maha Shivaratri Fasting) ಬಿಡುತ್ತಾರೆ. ಈ ಸಂದರ್ಭದಲ್ಲಿ ಫಕ್ರುದ್ದಿನ್ ಅವರು ವಿಶೇಷತೆ ಮೆರೆದಿದ್ದಾರೆ.

ಫಕ್ರುದ್ದಿನ್ ಅವರು ತಮ್ಮ ಹಿಂದೂ ಧರ್ಮದ ಸ್ನೇಹಿತರೆಲ್ಲರಿಗೂ ಮನೆಗೆ ಆಹ್ವಾನಿಸಿ ಅವರಿಗೆ ಉಪಹಾರ ನೀಡಿ ಶಿವರಾತ್ರಿಯಲ್ಲಿ ತಾವು ಪಾಲ್ಗೊಳ್ಳುತ್ತಾರೆ.  ಫಕ್ರುದ್ದಿನ್ ಅವರು ಧರ್ಮಕ್ಕಿಂತ ಸ್ನೇಹ ಸಂಬಂಧ ಮುಖ್ಯ ಎಂಬಂತೆ ಅವರೊಂದಿಗೆ ಸೇರಿ ನಕ್ಕು ನಲಿದು ಮಹಾ ಶಿವರಾತ್ರಿಯಲ್ಲಿ ಜಾತ್ಯಾತೀತವಾಗಿ ಆಚರಿಸಿದ್ದಾರೆ. ಸುಮಾರು ನೂರಕ್ಕೂ ಅಧಿಕ ಜನ ಸ್ನೇಹಿತರು ಫಕ್ರುದ್ದಿನ್ ಮನೆಯಲ್ಲಿ ಸೇರಿದ್ದರು. ಸ್ನೇಹಿತರ ಇಡೀ ಕುಟುಂಬ ಇಲ್ಲಿಗೆ ಬಂದಿದ್ದರು.


ಮನೆಯಲ್ಲಿ ಪೂಜೆ ಸಲ್ಲಿಸಿದ ನಂತರ ಫಕ್ರುದ್ದಿನ್ ಅವರ ಹಿಂದೂಸ್ನೇಹಿತರು ಫಕ್ರುದ್ದಿನ್ ಅವರ ಮನೆಯಲ್ಲಿ ಹಣ್ಣು, ಇಡ್ಲಿ, ವಡಾ, ಮಂಡಾಳು ವಗ್ಗರಣೆ ಮಿರ್ಚಿ ಸವಿದರು. ಎಲ್ಲರೂ ಹಣೆಯಲ್ಲಿ ವಿಭೂತಿ ಧರಿಸಿ ಉಪಹಾರ ಸೇವಿಸುವ ಮೂಲಕ ತಮ್ಮ ಶಿವರಾತ್ರಿಯ ನಿರಾಹಾರವನ್ನು ಅಂತ್ಯಗೊಳಿಸಿದರು. ಮುಂಜಾನೆಯಿಂದ ಉಪವಾಸ ವೃತ್ತ ಆಚರಿಸಿದ ಹಿಂದುಗಳು ತಮ್ಮ ಸ್ನೇಹಿತನ ಕುಟುಂಬದ ಸದಸ್ಯರೊಂದಿಗೆ ಕರೆಗೆ ಓಗೊಟ್ಟು ಸ್ನಾನ, ಪೂಜೆ ಸಲ್ಲಿಸಿದ ನಂತರ ಫಕ್ರುದ್ದಿನ್ ಅವರ ಮನೆಯಲ್ಲಿ ಸೇರಿ ಎಲ್ಲರೂ ಒಟ್ಟಿಗೆ ಕುಳಿತು ಉಪವಾಸ ವೃತವನ್ನು ಅಂತ್ಯಗೊಳಿಸಿದ್ದಾರೆ.

ರಾಜ್ಯದಲ್ಲಿ ಈಗ ಮಾನವ ಸಂಬಂಧಗಳು ಹಾಳಾಗಿರುವಾಗ ನಾವೆಲ್ಲ ಒಂದೇ ನಮ್ಮ ದೇಹದಲ್ಲಿ ಹರಿಯುತ್ತಿರುವುದು ಒಂದೇ ಬಣ್ಣದ ರಕ್ತ ಇಲ್ಲಿ ಜಾತಿ ಧರ್ಮಕ್ಕಿಂತ ಮಿಗಿಲಾಗಿದ್ದು ಸ್ನೇಹ ಸಂಬಂಧ, ಈ ಸ್ನೇಹ ಸಂಬಂಧವನ್ನು ಮೊದಲಿನಿಂದಲೂ ಗಟ್ಟಿಯಾಗಿದ್ದೇವೆ. ಮುಂದೆಯೂ ಇರುತ್ತೇವೆ ಎಂದು ಹೇಳಿದ್ದಾರೆ. ಈಮೂಲಕ ಫಕ್ರುದ್ದಿನ್ ಅವರು ಸರ್ವಧರ್ಮ ಸಮಭಾವ ಮತ್ತು ಪರಧರ್ಮವನ್ನು ಗೌರವಿಸುವ ಸಂಪ್ರದಾಯವನ್ನು ಪಾಲಿಸಿ ಇತರರಿಗೆ ಮಾದರಿ ಎನಿಸಿದ್ದಾರೆ. ಅವರ ಈ ನಡೆ ಅಪಾರ ಶ್ಲಾಘನೆಗೆ ಪಾತ್ರವಾಗಿದೆ.


ಸ್ನೇಹಿತ ಮನೆಯಲ್ಲಿ ನೀಡಿದ ಹಣ್ಣುಗಳನ್ನು ಹಾಗು ಉಪಹಾರ ಸೇವಿಸಿ ಶಿವರಾತ್ರಿಯನ್ನು ಸ್ನೇಹಿತರು ಸಂಭ್ರಮದಿಂದ ಆಚರಿಸಿದ್ದು ಇಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಕಲ್ಯಾಣ ಕರ್ನಾಟಕವು ಸೂಫಿ ಶರಣರ ನಾಡಾಗಿದ್ದು ಇಲ್ಲಿ ಮೊದಲಿನಿಂದಲೂ ಜನರು ಸೌಹಾರ್ದಯುತವಾಗಿರುತ್ತಾರೆ ಎಂಬುವುದಕ್ಕೆ ಇದು ಮತ್ತೊಮ್ಮೆ ಸಾಕ್ಷಿಯಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಹಿಂದಿನಿಂದಲೂ ಹಿಂದೂಗಳ ಹಬ್ಬದಲ್ಲಿ ಮುಸ್ಲಿಂ ಜನಾಂಗದವರು ಆಚರಿಸುವುದು, ಮುಸ್ಲಿಂ ಹಬ್ಬಗಳಲ್ಲಿ ಹಿಂದೂಗಳು ಪಾಲ್ಗೊಳ್ಳುವುದು ಸಾಮಾನ್ಯ. ಇಲ್ಲಿ ಹಿಂದೂ, ಮುಸ್ಲಿಂ ಕ್ರೈಸ್ತ ಎಂಬ ಭೇದ ಭಾವ ಅತ್ಯಂತ ಕಡಿಮೆ. ನಾವೆಲ್ಲ ಒಂದು, ನಾವೆಲ್ಲ ಸ್ನೇಹಿತರು, ನಾವೆಲ್ಲ ಒಂದೇ ತಾಯಿಯ ಮಕ್ಕಳು. ನಮ್ಮೊಂದಿಗೆ ನೀವು. ನಿಮ್ಮೊಂದಿಗೆ ನಾವು. ನಾವು ಸೇವಿಸುವುದು ಒಂದೇ ಗಾಳಿ. ನಮ್ಮ ದೇಹದಲ್ಲಿ ಹರಿಯುವ ರಕ್ತ ಕೆಂಪು. ಒಬ್ಬರಿಗೊಬ್ಬರು ಸಹಾಯ ಸಹಕಾರ ಮಾಡುತ್ತೇವೆ ಎಂಬುವುದನ್ನು ಆಗಾಗ ಈ ಭಾಗದ ಜನರು ಸಾಕ್ಷಿಕರಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

WhatsApp
Facebook
Telegram
error: Content is protected !!
Scroll to Top