ರಾಜ್ಯ: ಕೆಟ್ಟ ಮಕ್ಕಳು ಇರುತ್ತಾರೆಯೇ ಹೊರತು ಕೆಟ್ಟ ತಾಯಿ ಇರಲ್ಲ ಎಂಬ ಮಾತಿದೆ. ತಾಯಿ ಯಾವಾಗಲೂ ಮಕ್ಕಳಿಗೆ ಒಳ್ಳೆಯದನ್ನು ಬಯಸುವ ಜೀವ. ಆದ್ರೆ ಇಂತಹ ಮಾತುಗಳಿಗೆ ಅಪವಾದ ಎಂಬಂತೆ ಕೆಲ ಪ್ರಕರಣಗಳು ನಡೆಯುತ್ತಿರುತ್ತವೆ. ಮಗನನ್ನೇ ಕೊಲೆ ಮಾಡಿರುವ ಪ್ರಕರಣವೊಂದು ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಅನೈತಿಕ ಸಂಬಂಧ ಪ್ರಶ್ನೆ ಮಾಡಿದ 22 ವರ್ಷದ ಮಗನನ್ನು ತಾಯಿ ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ತಾಯಿ ಈ ಕೃತ್ಯಕ್ಕೆ ಆಕೆಯ ಹಿರಿಯ ಮಗನೂ ಸಾಥ್ ನೀಡಿದ್ದಾನೆ.
ಬಸವರಾಜ್ ದೋಟಿಹಾಳ ತಾಯಿಯಿಂದಲೇ ಹತನಾದ ಮಗ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಮ್ಯಾದಾರಡೊಕ್ಕಿ ಗ್ರಾಮದಲ್ಲಿ ಬಸವರಾಜ್ ತಾಯಿ ಹಾಗೂ ಸೋದರನೊಂದಿಗೆ ವಾಸವಾಗಿದ್ದನು.ಬಸವರಾಜ್ ತಾಯಿ ಅಮರಮ್ಮ ದೋಟಿಹಾಳ ಅದೇ ಗ್ರಾಮದ ಪಂಚಾಯ್ತಿ ಸದಸ್ಯ ಅಮರಪ್ಪ ಕಂದಗಲ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.ಜನವರಿ 16ರಂದು ಮನೆಯಲ್ಲಿ ಅಮರಪ್ಪ ಮತ್ತು ಅಮರಮ್ಮ ಜೊತೆಯಾಗಿರೋದನ್ನು ಬಸವರಾಜ್ ನೋಡಿದ್ದಾನೆ. ಅಮರಪ್ಪ ಮನೆಯಲ್ಲಿ ಇರೋದನ್ನು ಕಂಡು ಬಸವರಾಜ್ ಪ್ರಶ್ನೆ ಮಾಡಿದ್ದಾನೆ.
ಈ ವೇಳೆ ತಾಯಿ ಇನಿಯ ಅಮರಪ್ಪನ ಸಹಾಯದಿಂದ ಮಗನ ಕೊಲೆ ಮಾಡಿದ್ದಾಳೆ. ನಂತರ ಹಿರಿಯ ಮಗನ ಸಹಾಯದಿಂದ ಬಸವರಾಜ್ ನ ಮೃತದೇಹ ಮುಚ್ಚಿ ಹಾಕಿದ್ದಾರೆ.ಸದ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಇಂದು ಮುಚ್ಚಿದ್ದ ಮೃತದೇಹ ಹೊರ ತೆಗೆಯುವ ಸಾಧ್ಯತೆಗಳಿವೆ. ತಾವರೆಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.ಇನ್ನೂ ಈ ಕೊಲೆಯ ಸುದ್ದಿ ಕೇಳಿ ಮ್ಯಾದಾರಡೊಕ್ಕಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ತಾಯಿಯ ಅಕ್ರಮ ಸಂಬಂಧದಿಂದ 22 ವರ್ಷದ ಮಗ ಪ್ರಾಣ ಕಳೆದುಕೊಂಡಿದ್ದಾನೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.