ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಎಂಬುವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ. ನವೀನ್ ಹಾವೇರಿಯವರಾಗಿದ್ದು, 4ವರ್ಷಗಳಿಂದ ಉಕ್ರೇನ್ನಲ್ಲಿ ನೆಲೆಸಿದ್ದರು. ಬೆಳಗ್ಗೆ 11.30ಕ್ಕೆ ಕೊನೇ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದರು. ಅವರೀಗ ಮೃತಪಟ್ಟಿದ್ದು ದೃಢಪಟ್ಟಿದೆ.
ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಕಾರ್ಖೀವ್ನ ಕಾಲಮಾನದ ಪ್ರಕಾರ ಮುಂಜಾನೆ 7ಗಂಟೆ ಹೊತ್ತಿಗೆ ನವೀನ್ ಇನ್ನೂ ಹಲವರ ಜತೆ ತಿಂಡಿ ಪಡೆಯಲು ಹೊರಗೆ ನಿಂತಿದ್ದು. ಕಾರ್ಖೀವ್ನ ಗವರ್ನರ್ ಹೌಸ್ ಸಮೀಪವೇ ಇವರೆಲ್ಲ ಇದ್ದು, ಸುಮಾರು 8ಗಂಟೆ ಹೊತ್ತಿಗೆ ಅಲ್ಲಿ ರಷ್ಯಾ ಸೇನೆ ರಾಕೆಟ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾರೆ. ಕಾರ್ಖೀವ್ನ ಶವಾಗಾರದಲ್ಲಿ ಮೃತದೇಹವಿದೆ ಎಂದು ತಿಳಿಸಿದೆ. ಹಾಗೇ, ನವೀನ್ ಕುಟುಂಬದೊಂದಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಂಪರ್ಕದಲ್ಲಿದೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.