ಭಟ್ಕಳ ಆಸರಕೇರಿಯಲ್ಲಿ ಗುರುಭವನ ಉದ್ಗಾಟನೆ: ಜಾತಿಯ ಮೌಡ್ಯತೆಯಿಂದ ಹೊರ ಬಂದರೆ ಮಾತ್ರ ಹಿಂದೂ ಧರ್ಮ ಸುರಕ್ಷಿತ : ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ: ನಾವು ಇಂದು ಜ್ಞಾನದ ಕೊರತೆಯಿಂದ ಬಳಲುತ್ತಿದ್ದೇವೆ, ಜ್ಞಾನ ಸಂಪಾದನೆಗೆ ವೇದದಿಂದ ಮಾತ್ರ ಸಾಧ್ಯವಾಗುವುದು, ಪರಮಾತ್ಮನ ಸನ್ನೀದಿಯನ್ನು ಪಡೆಯಬೇಕಾದರೂ ವೇದದಿಂದ ಮಾತ್ರ ಸಾಧ್ಯ ಎಂದು ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.


ಅವರು ಇಲ್ಲಿನ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಗುರುಭವನದ ವಿದ್ಯುಕ್ತ ಉದ್ಘಾಟನೆಯನ್ನು ನೆರೆವೇರಿಸಿ ನಂತರ ಏರ್ಪಡಿಸಲಾಗಿದ್ದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು.
ವೇದಗಳನ್ನು ತಿಳಿಯದಿದ್ದರೂ ನಾವು ಉಪನಿಷತ್ತುಗಳನ್ನು ತಿಳಿದುಕೊಂಡರೆ ಅರಿವಿನ ಕಡೆಗೆ ಹೋಗಲು ಸಾಧ್ಯವಾಗುವುದು. ನಮಗೆ ನಾವು ಯಾರು ಎಂದು ಅರಿತಾಗ ಮಾತ್ರ ನಮ್ಮಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗುವುದು ಎಂದ ಶ್ರೀಗಳು ನಾವು ಭಗವಂತನಲ್ಲಿ ಒಂದಾಗ ಬೇಕು, ಭಗವಂತನ ಎದುರು ನಾವು ನಿಷ್ಕಲ್ಮಶ ಮನಸ್ಸಿನಿಂದ ಪ್ರಾರ್ಥನೆಯನ್ನು ಮಾಡಿದಾಗ ನಮ್ಮಲ್ಲಿರುವ ಅಹಂ ದೂರವಾಗಿ ನಾವು ಮೋಕ್ಷಕ್ಕೆ ಹೋಗಲು ಸಾಧ್ಯವಾಗುವುದು ಎಂದರು.
ಭಗವಂತ ವರ್ಣಗಳನ್ನು ಸೃಷ್ಟಿ ಮಾಡಿರುವುದು ಆಯಾಯ ಕೆಲಸಗಳನ್ನು ಮಾಡಲಿಕ್ಕೆ, ಸಹೋದರತೆಯಿಂದ ಬಾಳಲಿಕ್ಕೆ, ಯಾರೂ ಸಹ ಮೇಲು ಕೀಳೆನ್ನುವುದು ವರ್ಣ ನೀತಿಯಲ್ಲಿಲ್ಲ ಅವರವರು ಮಾಡುವ ಕರ್ಮದಿಂದ ಆಯಾಯ ವರ್ಣಕ್ಕೆ ಸೇರುತ್ತಾರೆ ಎಂದ ಸ್ವಾಮೀಜಿಯವರು ಇಂದು ಪ್ರತಿಯೊಂದಕ್ಕೂ ಜಾತಿ ಬಣ್ಣವನ್ನು ನೀಡಲಾಗುತ್ತಿದೆ, ಸಹೋದರತೆ ಮಾಯವಾಗುತ್ತಿದೆ ಸಮಾಜದಲ್ಲಿ ಪರಸ್ಪರ ಅಪನಂಬಿಕೆ ಸರಿಯಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು.
ನಮ್ಮ ಸಮಾಜದ ಹದಿಹರೆಯದವರು ಇಂದು ದಾರಿ ತಪ್ಪುತ್ತಿರುವ ಕುರಿತು ಪ್ರಸ್ತಾಪ ಮಾಡಿದ ಅವರು ನಮ್ಮಲ್ಲಿ ಚಿಕ್ಕಂದಿನಿಂದ ನಾವು ಮಕ್ಕಳಿಗೆ ಕೊಡುವ ಸಂಸ್ಕಾರದ ಕೊರತೆಯೇ ಇದಕ್ಕೆ ಕಾರಣವಾಗಿದೆ. ಮಕ್ಕಳಿಗೆ ಚಿಕ್ಕಂದಿನಿಂದ ನಾವು ಹಿಂದೂ ಧರ್ಮದ ಸಾರವನ್ನು ಅವರಿಗೆ ತಿಳಿಸಬೇಕಾಗಿದೆ. ಪ್ರಾರ್ಥನೆಯ ಪ್ರಯೋಜನ, ದೇವಸ್ಥಾನಗಳಿಗೆ ಹೋಗಿ ಪ್ರಾರ್ಥನೆಯನ್ನು ಮಾಡುವುದರ ಹಿಂದಿರುವ ಅಂಶಗಳನ್ನು ತಿಳಿಸಿ ತನ್ಮೂಲಕ ಅವರನ್ನು ಸಮಾಜಮುಖಿಯಾಗಿಸಿದಾಗ ಮಾತ್ರ ಅವರು ಹದಿಹರೆಯದಲ್ಲಿ ದಾರಿತಪ್ಪುವುದನ್ನು ತಡೆಯಬಹುದು, ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನ ನೀಡುವಲ್ಲಿ ಸರಕಾರದ ಶಿಕ್ಷಣ, ಮಠಮಾನ್ಯಗಳು ಕೂಡಾ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿಷಾದಿಸಿದ ಸ್ವಾಮೀಜಿ ಮುಂದಿನ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಕ್ಕಳಿಗೆ ಅಗತ್ಯ ಸಂಸ್ಕಾರವನ್ನು ಕೊಡಬೇಕಾಗಿದೆ ಎಂದೂ ತಿಳಿಸಿದರು.
ಇಂದು ಜನಪರ ಕೆಲಸ ಮಾಡುತ್ತಿರುವವರನ್ನು ಪಕ್ಷ, ಪಂಗಡದ ಮೂಲಕ ವಿರೋಧಿಸುತ್ತಿರುವುದು ಬೆಳೆದು ಬಂದಿದ್ದು ಇದು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಲ್ಲಿ ಕೂಡಾ ನಾವು ನೋಡಬಹುದು ಇದು ಸರಿಯಾದ ಮಾರ್ಗವಲ್ಲ, ಜನಪರವಾಗಿ ಕೆಲಸ ಮಾಡುತ್ತಿರುವವರ ಉತ್ತಮ ಕೆಲಸಗಳನ್ನು ಎಲ್ಲರೂ ಬೆಂಬಲಿಸುವಂತಾಗಬೇಕು ಆಗ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದೂ ಸ್ವಾಮೀಜಿಯವರು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಸಕ ಸುನಿಲ್ ನಾಯ್ಕ ಮಾತನಾಡಿ ಸಮಾಜದ ಕೆಲಸ ಕಾರ್ಯಗಳಿಗೆ ತಾವು ಸದಾ ಸಿದ್ಧರಿದ್ದು ಸಮಾಜದ ಗುರುಮಠಕ್ಕೆ ಈಗಾಗಲೇ 30 ಲಕ್ಷ ರೂಪಾಯಿಗಳ ಅನುದಾನವನ್ನು ವದಗಿಸಿದ್ದೇನೆ. ಇನ್ನೂ 20 ಲಕ್ಷ ರೂಪಾಯಿ ಬೇಡಿಕೆ ಸಲ್ಲಿಸಿದ್ದು ಸಧ್ಯದಲ್ಲಿಯೇ ಮಂಜೂರಿಯಾಗಲಿದೆ ಎಂದರು. ತಮ್ಮ ವಯಕ್ತಿಕ ನೆಲೆಯಲ್ಲಿ ಒಂದು ಸ್ವಾಗತ ಗೋಪುರವನ್ನು ಕಟ್ಟಿಸಿಕೊಡುವುದಾಗಿ ಭರವಸೆಯನ್ನು ನೀಡಿದರು.
ಗುರುಭವನದ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಮುರಳೀಧರ ಅವರು ನೆರವೇರಿಸಿದರು. ಗುರುಮಠದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಅವರು ಸ್ವಾಗತಿಸಿ ವರದಿ ವಾಚನ ಮಾಡಿದರು. ಶಾಂತಾರಾಮ ನಾಯ್ಕ ಜಾಲಿ ಅವರು ವಂದನಾರ್ಪಣೆಗೈದರು.
ವೇದಿಕೆಯಲ್ಲಿ ಮಾಜಿ ಶಾಸಕ ಜಿ.ಡಿ.ನಾಯ್ಕ, ನಿಕಟಪೂರ್ವ ಅಧ್ಯಕ್ಷ ಎಂ.ಆರ್. ನಾಯ್ಕ, ಮಾಜಿ ಅಧ್ಯಕ್ಷ ಡಿ.ಬಿ. ನಾಯ್ಕ, ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಕೂಟಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top