Congress Padayatra: ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಶುರು, ಯಾರೂ ಉತ್ಸಾಹ ಕಳೆದುಕೊಳ್ಳಬೇಡಿ ಎಂದ ಸಿದ್ದರಾಮಯ್ಯ

ನಮ್ಮ ಪಾದಯಾತ್ರೆ ನಿರ್ಬಂಧ ಮಾಡಬೇಕು, ಕಡಿತಗೊಳಿಸಬೇಕು ಅನ್ನೋದೆ ಇವರ ಉದ್ದೇಶ. ಇವರಿಗೆ ಒಂದು ನನಗೆ ಒಂದು ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆಲ್ಲಾ ನಾವು ಹೆದರಿಕೊಳ್ಳಲ್ಲ ಎಂದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

ರಾಮನಗರ(ಜ.13): ಮೇಕೆದಾಟು ಯೋಜನೆಗಾಗಿ(Mekedatu Project) ಕಾಂಗ್ರೆಸ್ ನಾಯಕರು(Congress Leaders)​ ಹಮ್ಮಿಕೊಂಡಿದ್ದ ಕಾಂಗ್ರೆಸ್​ ಪಾದಯಾತ್ರೆ(Congress Padayatra) 5ನೇ ದಿನಕ್ಕೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ. ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರಿಗೆ ಕೊರೋನಾ ಸೋಂಕು (Coronavirus) ತಗುಲಿದೆ. ಈ ಬೆನ್ನಲ್ಲೇ ಪಾದಯಾತ್ರೆ ನಿಲ್ಲಿಸುವಂತೆ ಕಾಂಗ್ರೆಸ್ ಹೈಕಮಾಂಡ್(Congress High Command)  ವಿಪಕ್ಷ ನಾಯಕ ಸಿದ್ದರಾಮಯ್ಯ  ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಸೂಚನೆ ನೀಡಿದೆ. ಅದರಂತೆ ಇಂದು ಕಾಂಗ್ರೆಸ್​ ನಾಯಕರು  ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಪಾದಯಾತ್ರೆ ನಡೆಸಲು ಕಾಂಗ್ರೆಸ್​ ನಾಯಕರು  ತೀರ್ಮಾನ ಮಾಡಿದ್ದಾರೆ. ಕೊವೀಡ್ ಕಡಿಮೆ ಆದ ನಂತರ ಪಾದಯಾತ್ರೆಗೆ ಕೈ ನಾಯಕರ ನಿರ್ಧರಿಸಿದ್ದಾರೆ.

ಅಭೂತಪೂರ್ವ ಯಶಸ್ಸು ಸಿಕ್ಕಿತ್ತು

ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ,  ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಒತ್ತಾಯ ಮಾಡಿ ನಾಲ್ಕು ದಿನ ಪಾದಯಾತ್ರೆ ಮಾಡಿದ್ವಿ. ಡಿಕೆ ಶಿವಕುಮಾರ್, ನಾನು ಶಾಸಕರು, ಪರಿಷತ್ ಸದಸ್ಯರು, ರಾಜ್ಯಸಭೆ ಸದಸ್ಯರು ಭಾಗಿಯಾಗಿದ್ವಿ. ಅಭೂತಪೂರ್ವ ಯಶಸ್ಸು ಸಿಕ್ಕಿತ್ತು ನಾವು ಪಾದಯಾತ್ರೆ ಮಾಡಲು ತೀರ್ಮಾನ ತೆಗೆದುಕೊಂಡ ಬಳಿಕ ಕೋವಿಡ್ ಮೂರನೇ ಅಲೇ ಆರಂಭವಾಗಿದೆ. ಅದಕ್ಕೂ ಮುನ್ನವೇ ನಾವು ತೀರ್ಮಾನ ತೆಗದುಕೊಂಡಿದ್ವಿ. ಅದ್ರಂತೆ 9 ನೇ ತಾರೀಖು ಸಂಗಮದಿಂದ ಉದ್ಘಾಟನೆ ಆಗಿ ಪ್ರಾರಂಭ ಆಗಿತ್ತು.  ಸಂಗಮದಿಂದ ರಾಮನಗರ ತನಕ ನಮ್ಮ ಮುಖಂಡರು ಕಾರ್ಯಕರ್ತರು ಪಾದಯಾತ್ರೆ ಯಶಸ್ವಿಯಾಗಿ ಮಾಡಿದ್ರು ಎಂದರು.

ಕೋವಿಡ್ ಹೆಚ್ಚಾಗಲು ಬಿಜೆಪಿಯವರೇ ಕಾರಣ
ಇಂದಿನಿಂದ ಬೆಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆ ಪ್ರಾರಂಭ ಆಗಬೇಕಿತ್ತು. ನಿನ್ನೆ ಎಷ್ಟು ಜನರಿಗೆ ರೋಗ ತಗುಲಿದೆ ಅಂತ ನೋಡ್ದಾಗ 15 ಸಾವಿರಕ್ಕೂ ಹೆಚ್ಚು ಜನರಿಗೆ ತಟ್ಟಿದೆ. ನಮ್ಮದು ಒಂದು ರಾಜಕೀಯ ಪಕ್ಷ. ಕಾಂಗ್ರೆಸ್ ಪಕ್ಷ ತುಂಬ ಹಳೆಯ ಪಕ್ಷ. ನಮಗೆ ನಮ್ಮದೇ ಆದ ಜವಾಬ್ದಾರಿ ಇದೆ. ಅದನ್ನ ನಿರ್ವಹಿಸೋದು ನಮ್ಮ ಕರ್ತವ್ಯ. ಈ ರೋಗ ವೇಗವಾಗಿ ಹರಡೋದಕ್ಕೆ ಕಾಂಗ್ರೆಸ್ ಕಾರಣವಲ್ಲ‌‌. ಬಿಜೆಪಿಯವರೇ ಕಾರಣ ಎಂದು ಕಿಡಿಕಾರಿದರು.

ಬಿಜೆಪಿಯವರು ರ್ಯಾಲಿ-ಸಭೆ ನಡೆಸಿದ್ರೂ ಯಾರೂ ಕೇಳಲಿಲ್ಲ

ಮೂರನೇ ಅಲೆ ಪ್ರಾರಂಭ ಆದರೂ ಸಿಎಂ ಯಾವ ಸಭೆಯನ್ನು ನಿಲ್ಲಿಸಿಲ್ಲ.  ಆರನೇ ತಾರೀಖು ಹೊಸದಾಗಿ ಮೇಲ್ಮನೆಗೆ ಆಯ್ಕೆಯಾದ ಶಾಸಕರ ಪ್ರಮಾಣ ವಚನ ವೇಳೆ ನಾಲ್ಕೈದು ಸಾವಿರ ಜನ ಸೇರಿದ್ರಿ. ಅಲ್ಲಿ ಯಾರು ಕೂಡ ಇವರು ಕಾಳಜಿ ವಹಿಸಿಲ್ಲ. ಸುಭಾಷ್ ಗುತ್ತೇದಾರ್ ಆಳಂದ ಶಾಸಕ ಒಂದು ರ್ಯಾಲಿ ನಡೆಸಿದ್ರು. ರೇಣುಕಾಚಾರ್ಯ ಜಾತ್ರೆ ಮಾಡಿದ್ರು. ಕೇಂದ್ರ ಸಚಿವರು ಮೆರವಣಿಗೆ ಮಾಡಿದ್ರು, ಜನಾರ್ಶಿವಾದ ಯಾತ್ರೆ ಮಾಡಿದರೂ ಯಾರು ಕೇಳಲಿಲ್ಲ. ಅರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಜಾತ್ರೆ ಆಯ್ತು. ಇಷ್ಟೆಲ್ಲ ಆದ್ರು ಒಬ್ಬರ ಮೇಲೂ ಕೇಸ್ ಹಾಕಿಲ್ಲ. ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್ ಗೆ ಎಫ್ಐಆರ್ ಕಳಿಸಿದ್ದಾರೆ. ಇವರ ಉದ್ದೇಶ ಒಳ್ಳೆಯದಲ್ಲ. ದುರುದ್ದೇಶದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದರು.

ಜನರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆ ಸ್ಥಗಿತ

ನಮ್ಮ ಪಾದಯಾತ್ರೆ ನಿರ್ಬಂಧ ಮಾಡಬೇಕು, ಕಡಿತಗೊಳಿಸಬೇಕು ಅನ್ನೋದೆ ಇವರ ಉದ್ದೇಶ. ಇವರಿಗೆ ಒಂದು ನನಗೆ ಒಂದು ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆಲ್ಲಾ ನಾವು ಹೆದರಿಕೊಳ್ಳಲ್ಲ. ನನ್ನ ಪ್ರಕಾರ ನಿನ್ನೆ ಒಂದೇ ದಿನ 15 ಸಾವಿರ ಕೇಸ್ ಆಗಿದ್ರೆ ಪಾದಯಾತ್ರೆಯಿಂದ ಅಲ್ಲ. ದೇಶದಲ್ಲಿ ಎಲ್ಲಾ ಕಡೆ ಕೇಸ್ ಜಾಸ್ತಿ ಆಗ್ತಿದೆ, ಸ್ವಾಭಾವಿಕ ಅದು.  ಜನರ ಮೇಲೆ ನಮಗೂ ಕಾಳಜಿ ಇದೆ. ನಮಗೆ ಆತಂಕ ಇದೆ. ಈ ಕಾರಣಕ್ಕಾಗಿ ನಾವು ಇವತ್ತು ಚರ್ಚೆ ಮಾಡಿದ್ದೀವಿ. ಕೇಸ್ ಹಾಕ್ತಾರೆ, ಸರ್ಕಾರ ಆದೇಶ ಮಾಡಿದೆ ಅಂತಲ್ಲ. ಜನರ ಆರೋಗ್ಯ ದೃಷ್ಟಿಯಿಂದ, ಜನರ ಹಿತದೃಷ್ಟಿಯಿಂದ ಎಂದರು.

ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳಬೇಡಿ

ನಾವು ಬೆಂಗಳೂರು ನಗರಕ್ಕೆ ಹೋಗ್ತಿದ್ವಿ. ಇವತ್ತು ಬಿಡದಿ, ಕೆಂಗೇರಿ ಮೂಲಕ ಬೆಂಗಳೂರು ಹೋಗ್ತಿದ್ವಿ. 19 ಕ್ಕೆ ರ್ಯಾಲಿ ಎಂಡ್ ಆಗ್ತಿತ್ತು ನ್ಯಾಷನಲ್ ಕಾಲೇಜ್ ಗ್ರೌಂಡ್ ನಲ್ಲಿ ಲಕ್ಷಾಂತರ ಜನ ಸೇರ್ತಾ ಇದ್ರು. ಬೆಂಗಳೂರು ಜನರ ಮನಸ್ಸಿನಲ್ಲಿ ಕೆಟ್ಟ ಅಭಿಪ್ರಾಯ ಬರಬಾರದು ಅಂತ ಪಾದಯಾತ್ರೆಯನ್ನು ತಾತ್ಕಾಲಿಕ ಸ್ಥಗಿತ ಮಾಡ್ತಿದಿವಿ. ಕೋವಿಡ್ ಕಡಿಮೆ ಅದ ಕೂಡಲೇ ರಾಮನಗರದಿಂದ ಪಾದಯಾತ್ರೆ ಮಾಡ್ತಿವಿ. ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳಬೇಡಿ ಎಂದು ಸಿದ್ದು ಕರೆ ನೀಡಿದರು.

ರಾಮನಗರದಿಂದಲೇ ಮತ್ತೆ ಪಾದಯಾತ್ರೆ ಶುರು

ಇಲ್ಲಿಂದಲೇ ನಾವು ಎಲ್ಲಿಗೆ ಹೋಗಬೇಕೊ ಅಲ್ಲಿಗೆ ಪಾದಯಾತ್ರೆ ಮಾಡ್ತೀವಿ ಬಾಕಿ ಏಳು ದಿನ ಪಾದಯಾತ್ರೆ ಮುಂದುವರಿಯಲಿದೆ. ಕಾಂಗ್ರೆಸ್ ಪಕ್ಷ ಜನರ ಒಳಿತು ಬಯಸೋ ಪಕ್ಷ. ಜನರ ಒಳಿತೇ ನಮ್ಮ ಧ್ಯೇಯ. ಅದ್ರಿಂದ ತಾತ್ಕಾಲಿಕವಾಗಿ ಪಾದಯಾತ್ರೆ ಸ್ಥಗಿತಗೊಳಿಸ್ತೀವಿ. ಜನರ ಸ್ಪಂದನೆ ತುಂಬ ಚೆನ್ನಾಗಿ ಇತ್ತು. ಮಹಿಳೆಯರು ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ರು ಎಂದರು

WhatsApp
Facebook
Telegram
error: Content is protected !!
Scroll to Top