ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಕೆಂದಲಗೇರಿ ಗ್ರಾಮದ ಮನೆಯೊಂದರಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ಮನೆಯಲ್ಲಿಯೇ ಕೂಡಿ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮನೆಯೊಂದರಲ್ಲಿ ಜಿಂಕೆಯ ಮಾಂಸ ಇದೆ ಎಂಬ ಮಾಹಿತಿಯ ಮೇಲೆ ದಾಳಿಗೆಂದು ಬಂದಿದ್ದ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಗ್ರಾಮಸ್ಥರು ಕೂಡಿಹಾಕಿದ್ದಾರೆ.
ಶುಕ್ರವಾರ ಗ್ರಾಮದ ಕೆಲವರು ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ವಾಪಸ್ಸಾಗಿದ್ದರು. ಇದನ್ನು ಕಂಡು ಜಿಂಕೆ ಬೇಟೆ ಆಡಿದ್ದಾರೆ ಎಂಬ ಅನುಮಾನದಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದೇ ಮಾಹಿತಿಯ ಮೇರೆಗೆ, ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯೊಂದರ ಮೇಲೆ ದಾಳಿ ಮಾಡಿದ್ದಾರೆ.ಅದರೆ, ಮನೆಯಲ್ಲಿ ಯಾವುದೇ ಬೇಟೆಯಾಡಿದ ಮಾಂಸ ಸಿಗದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು, ದಾಳಿಯ ನೇತೃತ್ವ ವಹಿಸಿದ್ದ ಆರ್.ಎಫ್.ಓ ಸುರೇಶ ಕುಲ್ಲೋಳ್ಳಿ ಹಾಗೂ ಅರಣ್ಯ ಸಿಬ್ಬಂದಿಗೆ ಮನೆಯಲ್ಲೇ ಕೂಡಿ ಹಾಕಿದ್ದಾರೆ
ನಂತರ ಪಿಎಸ್ಐ ಬಸವರಾಜ ಮಬನೂರು ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು.
ಬಳಿಕ ಗ್ರಾಮಸ್ಥರು ಊರಲ್ಲಿ ಸಾರ್ವಜನಿಕರ ಸಭೆ ನಡೆಸಿ ಅಧಿಕಾರಿಗಳಿಗೆ ಮಾಹಿತಿ ಕೊಟ್ಟವರ ಹೆಸರು ಬಹಿರಂಗ ಪಡಿಸಬೇಕು ಎಂಬ ಷರತ್ತನ್ನು ಹಾಕಿ ಅಧಿಕಾರಿಗಳನ್ನು ಮನೆಯಿಂದ ಬಿಡಲಾಯಿತು.