ರಿಯಲ್ ಸ್ಟಾರ್ ಉಪೇಂದ್ರ ಅಧಿಕೃತವಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರದ ಹೆಸರು ಎಂದಿನಂತೆ ಅವರದ್ದೇ ಸ್ಟೈಲಿನಲ್ಲಿ ಮೂಡಿ ಬಂದಿದೆ. ನೋಡಿದ ಕೂಡಲೇ ಮೂರು ನಾಮಗಳನ್ನು ನೆನಪಿಸುತ್ತದೆ. ಯು-ಐ ಎಂದುಕೊಳ್ಳಲೂಬಹುದು. ಕಪ್ಪು ಕುದುರೆ ಮೇಲೆ ಏರಿದ ಉಪೇಂದ್ರ ಲುಕ್ ವೈರಲ್ ಆಗಿದೆ. ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ಈ ಚಿತ್ರವನ್ನು ಕೆ ಪಿ ಶ್ರೀಕಾಂತ್ ಹಾಗೂ ಮನೋಹರ್ ನಿರ್ಮಿಸುತ್ತಿದ್ದಾರೆ. ರೈಡರ್ ಚಿತ್ರದ ನಂತರ ಲಹರಿ ಫಿಲಮ್ಸ್ ನಿರ್ಮಾಣಕ್ಕೆ ಕೈ ಜೋಡಿಸುತ್ತಿರುವ ಮತ್ತೊಂದು ಸಿನಿಮಾ ಇದು. ಈ ಕುರಿತು ನಟ, ನಿರ್ದೇಶಕ ಉಪೇಂದ್ರ ಜತೆಗಿನ ಮಾತುಕತೆ ಇಲ್ಲಿದೆ.
ಯಾವ ರೀತಿಯ ಸಿನಿಮಾ?
ಇಷ್ಟುವರ್ಷ ರಾಜ ಹೇಳಿದ್ದನ್ನೇ ಜನಕ್ಕೆ ಕೇಳಿ ಕೇಳಿ ಸಾಕಾಗಿ ಹೋಗಿದೆ. ಈಗ ಜನ ರಾಜನಿಗೆ ಹೇಳಬೇಕು. ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಹೀಗಾಗಿ ಸಿನಿಮಾಗೂ ಇದನ್ನೇ ಅನ್ವಯಿಸುವುದಾದರೆ ನಾನು ರಾಜನ ಸ್ಥಾನದಲ್ಲಿ ಕೂತು ಹೇಳುವುದಕ್ಕಿಂತ ನೀವು ನನಗೇ ಹೇಳಿ. ನಾನು ಕೇಳಿಸಿಕೊಳ್ಳುತ್ತೇನೆ.
ಸಿನಿಮಾ ಮಾಡಕ್ಕೆ ಹೊರಟಿರುವುದು, ಕತೆ ಬರೆಯುತ್ತಿರುವುದು ನೀವೇ ಅಲ್ಲವೇ?
ನಾನು ಸಿನಿಮಾ ಮಾಡುತ್ತಿರುವುದು, ಕತೆ ಬರೆಯುತ್ತಿರುವುದು ನೀವು ಹೇಳುವ ಮಾತು, ಫೀಡ್ಬ್ಯಾಕ್ನಿಂದಲೇ. ಹೀಗಾಗಿ ಈ ಸಿನಿಮಾ, ಇಲ್ಲಿನ ಕತೆ ಕೂಡ ನಿಮ್ಮದೇ. ಒಂದು ಪೋಸ್ಟರ್, ಟೈಟಲ್ ಬಿಡುಗಡೆ ಮಾಡಿದ್ದೇನೆ. ಅದನ್ನು ನೋಡಿದಾಗ ನಿಮಗೆ ಏನಿಸುತ್ತದೆ ಅದೇ ಸಿನಿಮಾ ಆಗಿರುತ್ತದೆ.
ಚಿತ್ರದ ಹೆಸರು ಮೂರು ನಾಮ ಅಂತನಾ?
ನಿಮ್ಮ ಆಲೋಚನೆಗೆ ಬಿಟ್ಟಿದ್ದೇನೆ. ಮೂರು ನಾಮ ಅಂತ ಬರೆಯುತ್ತೀರೋ, ಯೂ-ಐ ಅಂತಿರೋ, ನಾನು ಮತ್ತು ನೀನು ಅಂತ ಹೇಳ್ತಿರೋ ಎಂಬುದು ನಿಮ್ಮ ಆಲೋಚನೆ ಮೇಲೆ ನಿಂತಿದೆ.
ಈ ಪೋಸ್ಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಚರ್ಚೆಗಳು ಆಗುತ್ತಿವೆಯಲ್ಲ?
ಜನ ಯೋಚನೆ ಮಾಡುತ್ತಿದ್ದಾರೆ ಎನ್ನುವ ಖುಷಿ ಇದೆ. ಕಪ್ಪು ಕುದುರೆ, ಅದರ ಮೇಲೆ ನೀವು… ಏನು ಈ ಕಾಂಬಿನೇಶನ್ ಎಂದು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಕಲ್ಕಿ ಅವತಾರವೇ ಎಂದು ಕೇಳುತ್ತಿದ್ದಾರೆ. ಎಲ್ಲದಕ್ಕೂ ಉತ್ತರ ಕೊಟ್ಟರೆ ಹೇಗೆ. ಜನ ಏನೆಂದುಕೊಳ್ಳುತ್ತಾರೆ ಎಂಬುದನ್ನು ಮೊದಲು ಕೇಳೋಣ.
ಬೇರೆ ಭಾಷೆಗಳಲ್ಲೂ ಬರಲಿರುವ ಚಿತ್ರವೇ?
ಹೌದು. ಕನ್ನಡದ ಜತೆಗೆ ಬೇರೆ ಬೇರೆ ಭಾಷೆಯವರೂ ನೋಡುವ ಸಿನಿಮಾ ಇದಾಗಲಿದೆ.
ಪೋಸ್ಟರ್ನಲ್ಲಿ ಮೇಲಿರುವ ಸಾಲುಗಳೇನು?
ಇವನು ಯಾವಾಗ ಬರ್ತಾನೆ ಗೊತ್ತಿಲ್ಲ. ಆದ್ರೆ ನಿಶ್ಚಿತವಾಗಿ ಬರ್ತಾನೆ… ಎಂಬುದು.
ಯಾವಾಗ ಸಿನಿಮಾ ಸೆಟ್ಟೇರುತ್ತದೆ, ಚಿತ್ರೀಕರಣ ಯಾವಾಗ?
ಮೇ ತಿಂಗಳಲ್ಲಿ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಮಾಡಿಕೊಳ್ಳಲಿದೆ. ಎಲ್ಲೆಲ್ಲಿ ಚಿತ್ರೀಕರಣ ಎಂಬುದು ಇನ್ನೂ ನಿರ್ಧರಿಸಿಲ್ಲ. ಬೆಂಗಳೂರಿನಲ್ಲೇ ಹಲವು ಸೆಟ್ಗಳನ್ನು ಹಾಕುತ್ತಿದ್ದೇವೆ.